
ಪುತ್ತೂರು: ಫೈನಾನ್ಸ್ ವ್ಯವಹಾರ ನಡೆಸುತ್ತಿದ್ದ ಪುತ್ತೂರು ಸೂತ್ರಬೆಟ್ಟುವಿನ ವಿಶ್ವನಾಥ ರೈಯವರನ್ನು 20 ವರ್ಷಗಳ ಹಿಂದೆ ಉಪ್ಪಿನಂಗಡಿಯಲ್ಲಿ ಕೊಲೆ ಮಾಡಿದ್ದ ಪ್ರಕರಣದ ವಿಚಾರಣೆ ಪೂರ್ಣಗೊಳಿಸಿರುವ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಅಪರಾಧಿಯಾಗಿರುವ ಕೋಡಿಂಬಾಡಿಯ ಅಂತರ ನಿವಾಸಿ ವಿಶ್ವನಾಥ ಶೆಟ್ಟಿ ಯಾನೆ ಪಂಚಮಿ ವಿಶ್ವನಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

ನ್ಯಾಯಾಧೀಶ ರುಡಾಲ್ಫ್ ಪಿರೇರಾ ಈ ತೀರ್ಪು ಪ್ರಕಟಿಸಿದ್ದಾರೆ. ಪ್ರಕರಣದಲ್ಲಿ ಆರೋಪಿಯಾಗಿದ್ದ ಕೋಡಿಂಬಾಡಿ ವಿಶ್ವನಾಥ ಶೆಟ್ಟಿ ಅಪರಾಧಿ ಎಂದು ದ.13ರಂದು ಘೋಷಿಸಿದ್ದ ನ್ಯಾಯಾಧೀಶರು ಶಿಕ್ಷೆಯ ಪ್ರಮಾಣ ದ.15ರಂದು ಪ್ರಕಟಿಸುವುದಾಗಿ ತಿಳಿಸಿದ್ದರು. ಅದರಂತೆ ಶಿಕ್ಷೆಯ ಪ್ರಮಾಣ ಘೋಷಿಸಲಾಗಿದೆ.

ಕೊಲೆ ಮಾಡಿರುವ ಅಪರಾಧ(ಐಪಿಸಿ 302)ಕ್ಕಾಗಿ ಜೀವಾವಧಿ ಶಿಕ್ಷೆ ಮತ್ತು 50 ಸಾವಿರ ರೂ. ದಂಡ, ದಂಡ ತೆರಲು ತಪ್ಪಿದಲ್ಲಿ ಒಂದು ವರ್ಷ ಜೈಲು ಶಿಕ್ಷೆ, ಸಾಕ್ಷಿನಾಶ(ಐಪಿಸಿ 201)ಕ್ಕೆ 5 ವರ್ಷ ಜೈಲು ಶಿಕ್ಷೆ ಮತ್ತು 20 ಸಾವಿರ ರೂ.ದಂಡ, ದಂಡ ತೆರಲು ತಪ್ಪಿದಲ್ಲಿ 8 ತಿಂಗಳು ಜೈಲು ಶಿಕ್ಷೆ ಹಾಗೂ ಕೊಲೆ ಬೆದರಿಕೆ(ಸೆಕ್ಷನ್ 506)ಯೊಡ್ಡಿದ ಅಪರಾಧಕ್ಕಾಗಿ 3 ವರ್ಷ ಜೈಲು ಶಿಕ್ಷೆ, 25 ಸಾವಿರ ರೂ.ದಂಡ, ದಂಡ ತೆರಲು ತಪ್ಪಿದಲ್ಲಿ 6 ತಿಂಗಳ ಜೈಲು ಶಿಕ್ಷೆ ಅನುಭವಿಸುವಂತೆ ಆದೇಶಿಸಲಾಗಿದೆ.

ದಂಡದ ಮೊತ್ತದಲ್ಲಿ 60 ಸಾವಿರ ರೂ.ಗಳನ್ನು ಕೊಲೆಯಾದ ವಿಶ್ವನಾಥ ರೈಯವರ ಪತ್ನಿಗೆ ನೀಡಬೇಕು ಮತ್ತು ರೂ.20 ಸಾವಿರವನ್ನು ಮಾಫಿ ಸಾಕ್ಷಿಯಾಗಿರುವ ಸುಭಾಶ್ಚಂದ್ರ ಗೌಡರಿಗೆ ನೀಡುವಂತೆಯೂ ನ್ಯಾಯಾಲಯ ಆದೇಶಿಸಿದೆ. ಪ್ರಾಸಿಕ್ಯೂಶನ್ ಪರ ಸರಕಾರಿ ಅಭಿಯೋಜಕ ಪ್ರವೀಣ್ ಕುಮಾರ್ ವಾದಿಸಿದ್ದರು.











