ಮಂಗಳೂರು: ನಿನ್ನೆ ರಾತ್ರಿ ವೇಳೆಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಹಳೆ ವಿಮಾನ ನಿಲ್ದಾಣದ ರನ್ ವೇಯಲ್ಲಿ ಕಾಣಿಸಿಕೊಂಡಿದ್ದು, ಆತನನ್ನು ಸಿಐಎಸ್ಎಫ್ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.
ಏರ್ಪೋರ್ಟ್ನ ಎಟಿಎಸ್ ವಿಭಾಗದಲ್ಲಿ ರನ್ ವೇ ಕಾಮಗಾರಿ ನಡೆಯುತ್ತಿದ್ದು, ರಾತ್ರಿ ವೇಳೆಯಲ್ಲಿ ಸಿಐಎಸ್ಎಫ್ ಸಿಬ್ಬಂದಿ ಗಸ್ತು ತಿರುಗುತ್ತಿದ್ದ ವೇಳೆ ಅಪರಿಚಿತ ವ್ಯಕ್ತಿಯೋರ್ವ ತಿರುಗಾಡುತ್ತಿರುವುದು ಕಾಣಿಸಿಕೊಂಡಿದೆ.
ಸೋಮವಾರ ರಾತ್ರಿ 11 ಗಂಟೆ ಸುಮಾರಿಗೆ ಅಪರಿಚಿತ ವ್ಯಕ್ತಿ ಹಳೆ ವಿಮಾನ ನಿಲ್ದಾಣದ ರನ್ ವೇಯಲ್ಲಿ ತಿರುಗಾಡುತ್ತಿದ್ದನು. ಅಪರಿಚಿತನನ್ನು ವಿಚಾರಣೆ ನಡೆಸಿದ ಸಂದರ್ಭದಲ್ಲಿ ಪಶ್ಚಿಮ ಬಂಗಾಳದ ಮುರ್ಸಿದಾಬಾದ್ ಜಿಲ್ಲೆಯ ಬಧುಹಾ ಗ್ರಾಮದ ರಾಕೇಶ್ ಎಂದು ಹೇಳಿದ್ದಾನೆ. ಈತ ಲಾರಿಯ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದು, ಲಾರಿ ಡ್ರೈವರ್ ಸಂಬಳ ನೀಡದೆ ಇಲ್ಲಿ ಬಿಟ್ಟು ಹೋಗಿದ್ದಾನೆ ಎಂದು ಹೇಳಿದ್ದಾನೆ. ವಿಮಾನ ನಿಲ್ದಾಣ ಎಂದು ತಿಳಿಯದೆ ಈ ಭಾಗಕ್ಕೆ ಬಂದಿರುವುದಾಗಿ ಅಧಿಕಾರಿಗಳ ಎದುರು ಬಾಯ್ಬಿಟ್ಟಿದ್ದಾನೆ. ನಿಷೇಧಿತ ಪ್ರದೇಶಕ್ಕೆ ಅಕ್ರಮ ಪ್ರವೇಶ ಮಾಡಿರುವುದರಿಂದ ಸಿಐಎಸ್ಎಫ್ ಸಿಬ್ಬಂದಿ ನೀಡಿದ ದೂರಿನಂತೆ ಬಜ್ಪೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ, ಈತನನ್ನು ವಶಕ್ಕೆ ಪಡೆದಿದ್ದಾರೆ.