ಮಹಾರಾಷ್ಟ್ರ: ಕೊವಿಡ್ ಸೋಂಕಿಗೆ ಒಳಗಾಗಿ ಸತ್ತೇ ಹೋದರು ಎಂದು ಭಾವಿಸಿ, ಅಂತ್ಯಕ್ರಿಯೆಗೆ ಎಲ್ಲ ಸಿದ್ಧತೆಯನ್ನು ಮಾಡಿಕೊಂಡು, ಇನ್ನೇನು ಅಂತಿಮ ವಿಧಿ ವಿಧಾನ ನೆರವೇರಿಸಬೇಕು ಎನ್ನುವಷ್ಟರಲ್ಲಿ 76 ವರ್ಷದ ವೃದ್ಧೆ ಕಣ್ಣು ತೆರೆದ ವಿಚಿತ್ರ ಘಟನೆ ಮಹಾರಾಷ್ಟ್ರದ ಪುಣೆಯ ಬಾರಾಮತಿ ಎಂಬಲ್ಲಿ ನಡೆದಿದೆ.
ಹಿರಿಯ ಮಹಿಳೆ ಶಕುಂತಲಾ ಗಾಯಕ್ವಾಡ್ಗೆ ಕಳೆದ ಕೆಲವು ದಿನಗಳ ಹಿಂದೆ ಕೊವಿಡ್ ಸೋಂಕು ತಗುಲಿತ್ತು. ಮನೆಯಲ್ಲೇ ಐಸೋಲೇಟ್ ಆಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ವಯಸ್ಸಾದ ಕಾರಣದಿಂದ ಅವರ ಆರೋಗ್ಯ ದಿನೇದಿನೆ ಹದಗೆಡಲು ಶುರುವಾಯಿತು. ಇದರಿಂದ ಆತಂಕಗೊಂಡ ಕುಟುಂಬದವರು ಶಕುಂತಲಾ ಅವರನ್ನು ಬಾರಾಮತಿಯ ಆಸ್ಪತ್ರೆಗೆ ದಾಖಲಿಸಲು ತೆರಳಿದರು.
ಇದು ನಡೆದಿದ್ದು ಮೇ 10ರಂದು. ಕುಟುಂಬದವರು ಆಸ್ಪತ್ರೆಗೆ ಕರೆದುಕೊಂಡು ಹೋದರೂ ದುರದೃಷ್ಟಕ್ಕೆ ಬೆಡ್ ಸಿಗಲಿಲ್ಲ. ಇನ್ನೊಂದು ಆಸ್ಪತ್ರೆಗೆ ಕರೆದುಕೊಂಡು ಹೋಗಲು ವಾಹನಕ್ಕೆ ಬರಹೇಳಿ, ಕಾಯುತ್ತಿದ್ದ ವೇಳೆ ಶಕುಂತಲಾ ಅವರು ಎಚ್ಚರತಪ್ಪಿದರು. ಅವರಲ್ಲಿ ಯಾವುದೇ ಚಲನೆ ಇಲ್ಲದಂತಾಯಿತು. ಇದರಿಂದಾಗಿ ಶಕುಂತಲಾ ಮೃತಪಟ್ಟಿದ್ದಾರೆಂದು ಭಾವಿಸಿದ ಕುಟುಂಬದವರು ಅವರನ್ನು ಆಸ್ಪತ್ರೆಯಿಂದ ಮನೆಗೆ ಕರೆದುಕೊಂಡು ಬಂದಿದ್ದಲ್ಲದೆ, ಸಂಬಂಧಿಕರಿಗೆ ವಿಷಯವನ್ನೂ ತಿಳಿಸಿದರು.
ಹೀಗೆ ವೃದ್ಧೆಯ ಶವವನ್ನು ಮನೆಗೆ ಕರೆದುಕೊಂಡು ಹೋಗಿ ಅಂತ್ಯಕ್ರಿಯೆಗೆ ಸಿದ್ಧಮಾಡುತ್ತಿದ್ದಾಗಲೇ ಒಮ್ಮೆಲೇ ಎಚ್ಚರಗೊಂಡ ಶಕುಂತಲಾ ದೊಡ್ಡದಾಗಿ ಅಳಲು ಶುರು ಮಾಡಿದರು. ಶಾಕ್ಗೆ ಒಳಗಾದ ಮನೆಯವರು ಮತ್ತೆ ಅವರನ್ನು ಕರೆದುಕೊಂಡು ಆಸ್ಪತ್ರೆಗೆ ಹೋದರು. ಸದ್ಯ ಶಕುಂತಲಾರನ್ನು ಬಾರಾಮತಿಯ ಸಿಲ್ವರ್ ಜುಬ್ಲೀ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.