ಮಂಗಳೂರು: ರಸ್ತೆ ಅಪಘಾತದಲ್ಲಿ ಗಾಯಗೊಂಡು ಮಿದುಳು ನಿಷ್ಕ್ರಿಯಗೊಂಡ ಕೃಷಿಕರೋರ್ವರ ಅಂಗಾಂಗಗಳನ್ನು ಕುಟುಂಬಸ್ಥರು ದಾನ ಮಾಡುವ ಮೂಲಕ ಜೀವ ಸಾರ್ಥಕತೆ ಮೆರೆದಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಬಣಕಲ್ ಹೋಬಳಿಯ ಸಬ್ಬೇನಹಳ್ಳಿಯ ಕೃಷಿಕ ಧನ್ಯಕುಮಾರ್ (37) ಅವರ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಇತರರ ಬಾಳಿಗೆ ಬೆಳಕಾಗಿದ್ದರೆ. ಅವರು ದಾನ ಮಾಡಿದ ಅಂಗಾಂಗಗಳಿಂದಾಗಿ ಆರು ಮಂದಿ ರೋಗಿಗಳು ಅಂಗಾಂಗ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಲು ನೆರವಾಗಿದೆ.
ಧನ್ಯಕುಮಾರ್ ಅವರು ತಮ್ಮ ಬೈಕ್ನಲ್ಲಿ ಬಣಕಲ್ನಲ್ಲಿ ಡಿ.8ರಂದು ಸಾಗುತ್ತಿದ್ದಾಗ ವಾಹನವೊಂದು ಡಿಕ್ಕಿ ಹೊಡೆದು ಪರಾರಿಯಾಗಿತ್ತು. ತಲೆಗೆ ಗಂಭೀರ ಗಾಯಗಳಾಗಿದ್ದ ಅವರನ್ನು ನಗರದ ಫಾದರ್ ಮುಲ್ಲರ್ಸ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಚಿಕಿತ್ಸೆಗಾಗಿ ಡಿ 9ರಂದು ದಾಖಲಿಸಲಾಗಿತ್ತು.
ಫಾದರ್ ಮುಲ್ಲರ್ಸ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಉದಯಕುಮಾರ್, ‘ಧನ್ಯಕುಮಾರ್ ಅವರ ತಲೆಗೆ ತೀವ್ರ ಗಾಯಗಳಾಗಿದ್ದವು. ಹಾಗಾಗಿ ತಲೆಗೆ ಶಸ್ತ್ರಚಿಕಿತ್ಸೆ ಮಾಡುವಂತಿರಲಿಲ್ಲ. ಅವರ ಮಿದುಳು ನಿಷ್ಕ್ರಿಯಗೊಂಡಿದ್ದಾಗಿ ವೈದ್ಯರು ಘೋಷಿಸಿದ್ದಾರೆ. ಕುಟುಂಬದವರು ಗಾಯಾಳುವಿನ ಅಂಗಾಂಗ ದಾನ ಮಾಡಲು ಒಪ್ಪಿಗೆ ಸೂಚಿಸಿದರು. ಹಾಗಾಗಿ ಜೀವ ಸಾರ್ಥಕತೆ ಪೋರ್ಟಲ್ ಮೂಲಕ ನೋಂದಾಯಿಸಿ, ಅಂಗಾಂಗ ದಾನಕ್ಕೆ ವ್ಯವಸ್ಥೆ ಮಾಡಿದೆವು’ ಎಂದರು.
‘ಮಿದುಳು ನಿಷ್ಕ್ರಿಯಗೊಂಡ ಗಾಯಾಳುವಿನ ಹೃದಯ ಮತ್ತು ಶ್ವಾಸಕೋಶವನ್ನು ಚೆನ್ನೈನ ಎಂಜಿಎಂ ಆಸ್ಪತ್ರೆಗೆ, ಶ್ವಾಸಕೋಶ ಮತ್ತು ಪಿತ್ತಜನಕಾಂಗವನ್ನು ಬೆಂಗಳೂರಿನ ಪೋರ್ಟಿಸ್ ಆಸ್ಪತ್ರೆಗೆ, ಒಂದು ಮೂತ್ರಜನಕಾಂಗವನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಹಾಗೂ ಇನ್ನೊಂದು ಮೂತ್ರಜನಕಾಂಗವನ್ನು ನಗರದ ಎ.ಜೆ. ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.
ಮೃತ ಧನ್ಯಕುಮಾರ್ 4 ವರ್ಷದ ಮಗಳು, ಪತ್ನಿ ಹಾಗೂ ತಂದೆ, ತಾಯಿಯನ್ನು ಅಗಲಿದ್ದಾರೆ. ಮನೆಯ ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.