ತಿರುವನಂತಪುರಂ: ಮದುವೆ ಪ್ರಸ್ತಾವನೆಯನ್ನು ನಿರಾಕರಿಸಿದ್ದಕ್ಕೆ ವ್ಯಕ್ತಿಯೊಬ್ಬ ಮಾಡಿದ್ದು ಖತರ್ನಾಕ್ ಪ್ಲಾನ್. ಈತ ಮಾಡಿದ ಆವಾಂತರದಿಂದ ಕಷ್ಟ ಅನುಭವಿಸಿದ್ದು ಮಹಿಳಾ ಉದ್ಯಮಿ. ತನ್ನದಲ್ಲದ ತಪ್ಪನ್ನು ಕಾನೂನು ಮೂಲಕ ಹೋರಾಟ ನಡೆಸಿ ನ್ಯಾಯ ಪಡೆದ ಗಟ್ಟಿಗಿತ್ತಿ ಮಹಿಳೆ ಈಕೆ. ಗಾಂಜಾ ಕೇಸ್ನಲ್ಲಿ ಸಿಲುಕುವಂತೆ ಮಾಡಿದ ಆರೋಪಿಗಳಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ.
ಹೌದು ತಿರುವನಂತಪುರಂನ ವಜಯಿಲಾ ನಿವಾಸಿ ಶೋಭಾ ವಿಶ್ವನಾಥನ್ ಅವರು ಕೈಮಗ್ಗದ ಅಂಗಡಿಯ ವೀವರ್ ವಿಲ್ಲಾ ಮಾಲೀಕರು. ವ್ಯಕ್ತಿಯೊಬ್ಬನ ದ್ವೇಷದಿಂದಾಗಿ ಗಾಂಜಾ ಕೇಸ್ನಲ್ಲಿ ಸಿಲುಕಿಕೊಂಡಿದ್ದರು. ಸುಮಾರು ಅರ್ಧ ಕೆಜಿ ಗಾಂಜಾವನ್ನು ಕಳೆದ ಜನವರಿಯಲ್ಲಿ ಶೋಭಾ ಅವರ ಕಂಪನಿಯಲ್ಲಿ ವಶಪಡಿಸಿಕೊಳ್ಳಲಾಗಿತ್ತು. ಮ್ಯೂಸಿಯಂ ಪೊಲೀಸ್ ಮತ್ತು ನಾರ್ಕೊಟಿಕ್ ಸೆಲ್ ಶೋಭಾರನ್ನು ಬಂಧಿಸಿತ್ತು. ಬಳಿಕ ಜಾಮೀನಿನ ಮೇಲೆ ಹೊರಗಿದ್ದರು. ಅನಿರೀಕ್ಷಿತ ಬಂಧನದಿ0ದ ಶೋಭಾ ತುಂಬಾ ಅವಮಾನಗಳನ್ನು ಎದುರಿಸಬೇಕಾಯಿತು.
ತಮ್ಮ ಕಂಪನಿಯಲ್ಲಿ ಗಾಂಜಾ ಹೇಗೆ ಬಂತು ಎಂಬ ಗೊಂದಲದಲ್ಲಿದ್ದ ಶೋಭಾ, ತಾನು ಅಮಾಯಕಿ ಎಂದು ಸಾಬೀತು ಮಾಡಿಕೊಳ್ಳಬೇಕು ಎಂಬ ನಿರ್ಧಾರಕ್ಕೆ ಬಂದಿದ್ದರು. ಇದಾದ ಬಳಿಕ ಪ್ರಕರಣವನ್ನು ಸಮಗ್ರವಾಗಿ ತನಿಖೆ ನಡೆಸಬೇಕೆಂದು ಮುಖ್ಯಮಂತ್ರಿ ಹಾಗೂ ಡಿಜಿಪಿಗೆ ಶೋಭಾ ದೂರು ನೀಡಿದ್ದರು. ಕೊನೆಗೆ ಅಪರಾಧ ವಿಭಾಗ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿತು. ತನಿಖೆಯ ವೇಳೆ ಶೋಭಾ ಸ್ನೇಹಿತ ಹರೀಶ್ ಹರಿದಾಸ್ ಕೈವಾಡ ಇರುವುದು ಬಯಲಾಗಿದೆ. ಮದುವೆ ಪ್ರಸ್ತಾಪವನ್ನು ತಿರಸ್ಕರಿಸಿದ್ದಕ್ಕೆ ಸೇಡು ತೀರಿಸಿಕೊಳ್ಳಲು ಆಕೆಯನ್ನು ಗಾಂಜಾ ಪ್ರಕರಣದಲ್ಲಿ ಸಿಲುಕಿಸಿರುವುದಾಗಿ ಬಯಲಾಗಿದೆ.
ವಿವೇಕ್? ಹೆಸರಿನ ವ್ಯಕ್ತಿಯ ಕೈಯಲ್ಲಿ ಶೋಭಾ ಕಂಪನಿಯಲ್ಲಿ ಹರೀಶ್ ಗಾಂಜಾ ಇರಿಸಿರುವುದು ತನಿಖೆಯ ವೇಳೆ ಬಯಲಾಗಿದೆ. ಅಲ್ಲದೆ, ಕಂಪನಿ ಮೇಲೆ ದಾಳಿ ಮಾಡುವಂತೆ ಕರೆ ಮಾಡಿದ್ದ ಮೊಬೈಲ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದೀಗ ನಿಜಾಂಶ ತಿಳಿದು ಶೋಭಾ ಶಾಕ್ ಆಗಿದ್ದಾರೆ. ಹರೀಶ್ ಈ ರೀತಿ ಮಾಡುತ್ತಾರೆ ಎಂದು ನಾನು ನಿರೀಕ್ಷೆಯನ್ನು ಮಾಡಿರಲಿಲ್ಲ ಎಂದು ತಿಳಿಸಿದ್ದಾರೆ. ಶೋಭಾ ಮೇಲಿದ್ದ ಕೇಸ್ ಅನ್ನು ವಜಾಗೊಳಿಸಲಾಗಿದ್ದು, ಹರೀಶ್ ಮತ್ತು ವಿವೇಕ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.