ಸಿನಿಮಾ ಲೋಕದ ಡ್ರಾಮಾ ಕ್ವೀನ್ ಎಂದೇ ಖ್ಯಾತಿ ಪಡೆದಿರುವ ಹಾಗೂ ಸದಾ ವಿವಾದಗಳಿಂದಲೇ ಸುದ್ದಿಯಾಗುವ ಬಾಲಿವುಡ್ ನಟಿ ರಾಖಿ ಸಾವಂತ್, ಇತ್ತೀಚೆಗಷ್ಟೇ ಮೈಸೂರು ಮೂಲದ ಆದಿಲ್ ದುರ್ರಾನಿ ಎಂಬುವರನ್ನು ಮದುವೆಯಾಗಿದ್ದು, ಇದೀಗ ತನ್ನ ಪತಿಗೆ ವಿವಾಹೇತರ ಸಂಬಂಧ ಇದೆ ಎಂದು ಆರೋಪ ಮಾಡುವ ಮೂಲಕ ಮತ್ತೆ ಸುದ್ದಿಗೆ ಗ್ರಾಸವಾಗಿದೆ.
ಕೆಲ ದಿನಗಳ ಹಿಂದೆಯಷ್ಟೇ ತಾವು ಆದಿಲ್ ಜೊತೆ ಮದುವೆ ಆಗಿರುವುದಾಗಿ ರಾಖಿ ಘೋಷಣೆ ಮಾಡಿದರು. ಈ ವಿಚಾರ ಆದಿಲ್ ಮನೆಯವರಿಗೆ ಗೊತ್ತಾಗಿ ತಮಗೆ ತೊಂದರೆ ಆಗುತ್ತಿದೆ ಎನ್ನುವ ಸಂಕಟವನ್ನೂ ಅವರು ಹಂಚಿಕೊಂಡಿದ್ದರು. ಆದಿಲ್ ಮನೆಯವರು ತನ್ನ ಪತಿಯ ಮೇಲೆ ಒತ್ತಡ ಹಾಕುತ್ತಿದ್ದಾರೆ. ನಮ್ಮ ಮದುವೆ ಎಲ್ಲಿ ಮುರಿದು ಬೀಳುತ್ತದೆಯೋ ಎನ್ನುವ ಭಯ ಇದೆ. ಮೈಸೂರಿನವರು ನಮ್ಮನ್ನು ರಕ್ಷಿಸಬೇಕು ಎಂದು ಮನವಿ ಮಾಡಿಕೊಂಡಿದ್ದರು. ಅಲ್ಲದೇ, ಆದಿಲ್ ತಮ್ಮ ಮದುವೆ ಬಗ್ಗೆ ಘೋಷಣೆ ಮಾಡಬೇಕು ಎಂದೂ ಒತ್ತಾಯಿಸಿದ್ದರು. ತಮ್ಮ ಮದುವೆ ವಿಚಾರ ಹಾಗೂ ಫೋಟೋಗಳನ್ನು ರಾಖಿ ಸಾವಂತ್ ಸೋಷಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡುತ್ತಿದ್ದಂತೆಯೇ ಅನಿವಾರ್ಯವಾಗಿ ಆದಿಲ್ ಕೂಡ ಒಪ್ಪಿಕೊಳ್ಳಬೇಕಾಯಿತು. ಆನಂತರ ಒಟ್ಟಿಗೆ ನಗುನಗುತ್ತಾ ಕ್ಯಾಮೆರಾಗೆ ಪೋಸ್ ಕೊಟ್ಟಿತ್ತು ಜೋಡಿ. ಇದೀಗ ರಾಖಿ ಮತ್ತೆ ಕಣ್ಣೀರು ಹಾಕಿದ್ದಾರೆ.
ಫೆ. 2ರಂದು ಜಿಮ್ಗೆ ತೆರಳುವಾಗ ಎದುರಾದ ಸುದ್ದಿಗಾರರೊಂದಿಗೆ ಮಾತನಾಡಿದ ರಾಖಿ ಸಾವಂತ್, ಗಂಡ ಆದಿಲ್ ದುರ್ರಾನಿ ಬಗ್ಗೆ ಮಾತನಾಡುತ್ತಾ ಕಣ್ಣೀರಾಕಿದರು. ಮರಾಠಿಯ ಬಿಗ್ಬಾಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದಾಗ ಆದಿಲ್ ನನಗೆ ಮೋಸ ಮಾಡಿದ್ದಾನೆ ಎಂದು ಆರೋಪ ಮಾಡಿದ್ದಾರೆ. ಅಂದಹಾಗೆ ರಾಖಿ ಅವರು ಮಹೇಶ್ ಮಂಜ್ರೇಕರ್ ಹೋಸ್ಟ್ ಮಾಡಿದ ರಿಯಾಲಿಟಿ ಶೋಗೆ ಚಾಲೆಂಜರ್ ಆಗಿ ಪ್ರವೇಶಿಸಿದರು ಮತ್ತು ನಾಲ್ಕನೇ ರನ್ನರ್ ಅಪ್ ಆಗಿ ಹೊರಬಂದರು.
ಆದಿಲ್ ಯಾವುದೇ ಸಂದರ್ಶನ ಮಾಡದಂತೆ ಮಾಧ್ಯಮದವರ ಬಳಿ ಮನವಿ ಮಾಡಿದ ರಾಖಿ ಸಾವಂತ್, ನೀವು ಆದಿಲ್ನ ಯಾವುದೇ ಸಂದರ್ಶನಗಳನ್ನು ತೆಗೆದುಕೊಳ್ಳಬಾರದು. ಅವನನ್ನು ದೊಡ್ಡ ಸ್ಟಾರ್ ಮಾಡಲು ಪ್ರಯತ್ನಿಸುವುದು ನನಗೆ ಇಷ್ಟವಿಲ್ಲ. ನನ್ನನ್ನು ಬಳಸಿಕೊಂಡು ಆತ ಬಾಲಿವುಡ್ ಪ್ರವೇಶಿಸಲು ಬಯಸುತ್ತಿದ್ದಾನೆ. ನನ್ನ ಜೊತೆ ಬಂದರೆ ಆತ ಜಿಮ್ಗೆ ಬರುವುದಿಲ್ಲ. ಬದಲಾಗಿ ಮಾಧ್ಯಮಗಳ ಜೊತೆ ಸಂದರ್ಶನಗಳನ್ನು ನೀಡಲು ಇಲ್ಲಿಯೇ ಇರುತ್ತಾನೆ. ನಾನು ಅದನ್ನು ಬಯಸುವುದಿಲ್ಲ ಎಂದಿದ್ದಾರೆ.
ಆದಿಲ್ ಓರ್ವ ಸುಳ್ಳುಗಾರ. ಆ ಹುಡುಗಿಯನ್ನು ಬ್ಲಾಕ್ ಮಾಡುತ್ತೇನೆ ಅಂತಾ ಕುರಾನ್ ಮೇಲೆ ಆಣೆ ಮಾಡಿದ್ದಾನೆ. ಆದರೆ, ಅದರಂತ ನಡೆದುಕೊಳ್ಳಲಿಲ್ಲ. ಇದೀಗ ಆ ಹುಡುಗಿ ಆತನನ್ನು ಬ್ಲಾಕ್ಮೇಲ್ ಮಾಡುತ್ತಿದ್ದಾರೆ. ಅವಳ ಬಳಿ ಆದಿಲ್ ಕುರಿತ ಕೆಲವು ಕೊಳಕು ಸಾಕ್ಷಿಗಳು ಇವೆ ಎಂದು ಹೇಳಿದ್ದಾರೆ.
ರಾಖಿ ಸಾವಂತ್ ಆರೋಪಕ್ಕೆ ನೆಟ್ಟಿಗರು ಗರಂ ಆಗಿದ್ದು, ಪ್ರಚಾರಕ್ಕಾಗಿ ಈ ರೀತಿ ಆರೋಪ ಮಾಡುತ್ತಿದ್ದಾರೆ ಎಂದಿದ್ದಾರೆ. ಸದಾ ಪ್ರಚಾರದಲ್ಲಿರುವ ಹುಟ್ಟು ಆಕೆಗೆ ಹಿಡಿದಿದೆ. ಇತ್ತೀಚೆಗಷ್ಟೇ ಅವರ ತಾಯಿ ತೀರಿ ಹೋದರು. ಅದರ ಮಾರನೇ ದಿನವೇ ಆಕೆ ಜಿಮ್ಗೆ ಬಂದಿದ್ದಾಳೆ. ಇಂಡಸ್ಟ್ರಿಯಲ್ಲಿ ತುಂಬಾ ವರ್ಷಗಳಿಂದ ಕೆಲಸ ಮಾಡಿದರೂ ಆಕೆ ಒಂದು ಗೌರವವನ್ನು ಉಳಿಸಿಕೊಂಡಿಲ್ಲ ಎಂದು ಕಾಮೆಂಟ್ ಮೂಲಕ ಟೀಕಾ ಪ್ರಹಾರ ನಡೆಸಿದ್ದಾರೆ.