ಬೆಂಗಳೂರು: ಮಾಜಿ ಐಪಿಎಸ್ ಅಧಿಕಾರಿ ಒಂದು ವರ್ಷದಿಂದ ಆಮ್ ಆದಿ ಪಕ್ಷದಲ್ಲಿ ರಾಜಕಾರಣ ಆರಂಭಿಸಿದ್ದ ಭಾಸ್ಕರ ರಾವ್ ದಿಢೀರ್ ಬೆಳವಣಿಗೆಯಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ನೇತೃತ್ವದಲ್ಲಿ ಭಾಸ್ಕರ ರಾವ್ ಬಿಜೆಪಿ ಸೇರಿದ್ದು ಪಕ್ಷದ ನಾಯಕರ ಮಾರ್ಗದರ್ಶನದಲ್ಲಿ ಪಕ್ಷಕ್ಕಾಗಿ ದುಡಿಯುತ್ತೇನೆ ಎಂದು ಹೇಳಿದ್ದಾರೆ.
ಬಿಜೆಪಿ ಸೇರ್ಪಡೆ ಬಳಿಕ ಮಾತನಾಡಿದ ಭಾಸ್ಕರ್ ರಾವ್, ಸನಾತನ ಧರ್ಮಕ್ಕೆ ಸೇರಿದ ಪಕ್ಷಕ್ಕೆ ಸೇರ್ಪಡೆಯಾಗಿರೋದು ಬಹಳ ಸಂತೋಷವನ್ನು ತಂದಿದೆ. ಸನಾತನ ಧರ್ಮ, ರಾಷ್ಟ್ರೀಯತೆ ಮೇಲೆ ನನಗೆ ಪ್ರೀತಿ ಇತ್ತು. ಕರ್ನಾಟಕದಲ್ಲಿ ಆಮ್ ಆದ್ಮಿ ಪಾರ್ಟಿ ಬೆಳೆಯುತ್ತಿಲ್ಲ. ಅದಕ್ಕೆ ನನ್ನ ವಯಸ್ಸನ್ನು ವೇಸ್ಟ್ ಮಾಡದೇ ಬಿಜೆಪಿ ಸೇರಬೇಕೆಂದು ಪಕ್ಷ ಸೇರಿದ್ದೇನೆ ಎಂದರು. ಎಲ್ಲೆಲ್ಲಿ ನನ್ನ ಅವಶ್ಯಕತೆ ಇದೆ, ಅಲ್ಲಿ ನಾನು ತೊಡಗಿಸಿಕೊಂಡು ಕೆಲಸ ಮಾಡುತ್ತೇನೆ. ಭಾರತ ಸಮೃದ್ಧವಾಗಿ ಗಟ್ಟಿಯಾಗಬೇಕು ಅಂದರೆ ಇದು ಬಿಜೆಪಿಯಿಂದ ಮಾತ್ರ ಸಾಧ್ಯ. ಬೇರೆ ಯಾವ ಪಕ್ಷಗಳಿಂದಲೂ ಸಾಧ್ಯ ಇಲ್ಲ ಎಂದು ಬಿಜೆಪಿಯನ್ನು ಹಾಡಿ ಹೊಗಳಿದರು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿ, ನಿವೃತ್ತಿ ನಂತರ ಆಪ್ ಸೇರಿ ರಾಜಕೀಯ ಅನುಭವ ಪಡೆದಿದ್ದಾರೆ. ಡಬಲ್ ಇಂಜಿನ್ ಸರ್ಕಾರದಿಂದ ಕಲ್ಯಾಣ ಕರ್ನಾಟಕ ಸಾಧ್ಯ ಎಂದು ಪಕ್ಷಕ್ಕೆ ಬಂದಿದ್ದಾರೆ ಎಂದರು. ಇವತ್ತು ದೇಶ ಹಾಗೂ ರಾಜ್ಯದಲ್ಲಿ ಬಿಜೆಪಿ ಪರವಾದ ಅಲೆ ಇದೆ. ಬೇರೆ ಬೇರೆ ನಾಯಕರು ಇನ್ನೂ ಬಿಜೆಪಿ ಸೇರಲು ರೆಡಿ ಆಗಿದ್ದಾರೆ. ಅವರ ಆಡಳಿತಾತ್ಮಕ ಅನುಭವಗಳನ್ನು ಪಾರ್ಟಿ ಸ್ವೀಕಾರ ಮಾಡುತ್ತದೆ. ಅವರು ಯಾವುದೇ ಆಸೆ ಆಕಾಂಕ್ಷೆಗಳನ್ನು ಇಟ್ಟಿಲ್ಲ. ಅವರಿಗೆ ಪಕ್ಷದಲ್ಲಿ ಒಳ್ಳೆಯದಾಗಲಿ ಎಂದು ನಳಿನ್ ಕುಮಾರ್ ಕಟೀಲ್ ಹಾರೈಸಿದರು.
ಮಂಗಳವಾರ ಬೆಳಗ್ಗೆ ಬಿಜೆಪಿ ಕಚೇರಿಗೆ ಭಾಸ್ಕರ್ ರಾವ್ ಭೇಟಿ ನೀಡಿದ್ದರು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ರಾಜ್ಯ ಚುನಾವಣಾ ಸಹ ಉಸ್ತುವಾರಿ ಕೆ.ಅಣ್ಣಾಮಲೈ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರೊಂದಿಗೆ ಈ ವೇಳೆ ಚರ್ಚೆ ಮಾಡಿದ್ದರು.ಬಿಜೆಪಿ ಕಚೇರಿಗೆ ಭೇಟಿ ನೀಡಿದ ಬಳಿಕ ಕಂದಾಯ ಸಚಿವ ಆರ್ ಅಶೋಕ್ ಜೊತೆಗೂ ಭಾಸ್ಕರ್ ರಾವ್ ಪದ್ಮನಾಭನಗರದಲ್ಲಿ ಮಾತುಕತೆ ನಡೆಸಿದ್ದಾರೆ.
ಆದರೆ ಮಾರ್ಚ್ 4ರಂದು ದಾವಣಗೆರೆಯಲ್ಲಿ ಆಮ್ ಆದಿ ಪಕ್ಷದ ಸಂಚಾಲಕ ದೆಹಲಿ ಸಿಎಂ ಅರವಿಂದ ಕೇಜ್ರವಾಲ್ ಬೃಹತ್ ರ್ಯಾಲಿ ಹಮ್ಮಿಕೊಂಡಿರುವ ಹೊತ್ತಲ್ಲೇ ಭಾಸ್ಕರ ರಾವ್ ಆಪ್ ತೊರೆದು ಬಿಜೆಪಿ ಸೇರಿರುವುದು ಒಂದು ರೀತಿಯಲ್ಲಿ ಆಪ್ ಪಕ್ಷಕ್ಕೆ ಹಿನ್ನಡೆ ಅನ್ನುವ ಮಾತು ಕೇಳಿಬರುತ್ತಿದೆ, ಆದರೆ ಈ ರೀತಿ ಪಕ್ಷ ಬದಲಾವಣೆ ಮಾಡಿರುವುದು ಭಾಸ್ಕರ ರಾವ್ ಪಾಲಿಗೂ ನೈತಿಕವಾಗಿ ಹಿನ್ನಡೆ ಆಗಬಲ್ಲದು ಅನ್ನುವ ವಿಶ್ಲೇಷಣೆಯೂ ನಡೆದಿದೆ.