ಹೊಟ್ಟೆ ಆರೋಗ್ಯವಾಗಿರಬೇಕೆಂದರೆ ಜೀರ್ಣಕ್ರಿಯೆ ಸರಿಯಾಗಿರಬೇಕು. ಚಯಾಪಯ ಕ್ರಿಯೆ ಸರಿಯಾಗಿ ಇರಬೇಕೆಂದರೆ ನಾವು ಸೇವಿಸುವ ಆಹಾರ ಉತ್ತಮವಾಗಿರಬೇಕು. ಅದೇ ರೀತಿ ಸಮಯಕ್ಕೆ ಸರಿಯಾಗಿ ಇರಬೇಕು. ಆಗ ಮಾತ್ರ ಹೊಟ್ಟೆಯ ಕ್ರಿಯೆ ಸರಿಯಾಗಿರುತ್ತದೆ.
ಹಾಗಾದರೆ ಜೀರ್ಣಕ್ರಿಯೆ ಸರಿಯಾಗಿ ಇರಬೇಕೆಂದರೆ ಆಹಾರವನ್ನು ಹೇಗೆ ಸೇವನೆ ಮಾಡಬೇಕು ಎನ್ನುವ ಬಗ್ಗೆ ಆಯುರ್ವೇದ ವೈದ್ಯರಾದ ಡಾ. ಶರದ್ ಕುಲಕರ್ಣಿ ಮಾಹಿತಿ ನೀಡಿದ್ದಾರೆ ಇಲ್ಲಿದೆ ನೋಡಿ.
ಅಜೀರ್ಣ, ಆಸಿಡಿಟಿ ಗ್ಯಾಸ್ಟ್ರಿಕ್ ಉಂಟಾಗಲು ಕಾರಣವೆಂದರೆ
ಹೆಚ್ಚು ಮಸಾಲೆಯಿರುವ ಆಹಾರ ಸೇವನೆ
ಕರಿದ ಆಹಾರಗಳನ್ನು ಪದೇ ಪದೇ ತಿನ್ನುವುದು
ಸರಿಯಾದ ಸಮಯಕ್ಕೆ ಆಹಾರ ಸೇವನೆ ಮಾಡದೇ ಇರುವುದು
ವೇಗವಾಗಿ ಊಟ ಮಾಡುವುದು.
ನೆಲಕ್ಕೆ ಕುಳಿತು ಊಟ ಮಾಡಿ
ಊಟ, ತಿಂಡಿಗೆ ಡೈನಿಂಗ್ ಟೇಬಲ್ಗೆ ಅವಲಂಬಿತವಾಗಿರುವುದು ಇತ್ತೀಚಿನ ದಿನಗಳಲ್ಲಿ ಸರ್ವೇಸಾಮಾನ್ಯವಾಗಿದೆ. ಆದರೆ ಇದು ಆಹಾರ ಸರಿಯಾಗಿ ಜೀರ್ಣವಾಗದಂತೆ ಮಾಡುತ್ತದೆ.
ಹೀಗಾಗಿ ಆಹಾರ ಸರಿಯಾಗಿ ಜೀರ್ಣವಾಗಲು ನೆಲಕ್ಕೆ ಕುಳಿತು ಊಟ ಮಾಡಿ. ಕೆಳಕ್ಕೆ ಕುಳಿತಾಗ ಕಾಲನ್ನು ಮಡಚಿ ಪದ್ಮಾಸನದಲ್ಲಿ ಕುಳಿತುಕೊಳ್ಳುತ್ತೇವೆ. ಇದರಿಂದ ಆಹಾರ ಸುಲಭವಾಗಿ ಜೀರ್ಣವಾಗುತ್ತದೆ. ಹೀಗಾಗಿ ನೆಲಕ್ಕೆ ಕುಳಿತು ಊಟ ಮಾಡುವುದು ಒಳ್ಳೆಯದು ಎನ್ನುತ್ತಾರೆ ವೈದ್ಯರು.
ಗಮನವಿಟ್ಟು ಊಟ ಮಾಡುವುದು
ಅನೇಕರನ್ನು ನಾವು ನೋಡುತ್ತೇವೆ, ಊಟ ಮಾಡುವಾಗ ಮೊಬೈಲ್ ನೋಡುವುದು, ಟಿವಿ ನೋಡುವುದು, ಯಾರೊಂದಿಗೋ ಅತಿಯಾಗಿ ಹರಟುತ್ತಾ ಊಟ ಮಾಡುವುದು ಮಾಡುತ್ತಾರೆ. ಇದರಿಂದ ಊಟದ ಮೇಲೆ ಗಮನವಿರುವುದಿಲ್ಲ. ತಿಂದ ಆಹಾರವೂ ಸರಿಯಾಗಿ ಜೀರ್ಣವಾಗುವುದಿಲ್ಲ.
ಆದ್ದರಿಂದ ಊಟ ಮಾಡುವಾಗ, ಆಹಾರ ಸೇವನೆ ಮಾಡುತ್ತಿರುವಾಗ ಸಂಪೂರ್ಣ ಗಮನ ಆಹಾರದ ಮೇಲೆಯೇ ಇರಬೇಕು. ಆಗ ಮಾತ್ರ ತಿಂದಿದ್ದು ಸರಿಯಾಗಿ ಜೀರ್ಣವಾಗಿ ಮೈಗೆ ಹತ್ತುತ್ತದೆ.
ನಿಧಾನವಾಗಿ ಊಟ ಮಾಡುವುದು
ಗ್ಯಾಸ್ಟ್ರಿಕ್, ಆಸಿಡಿಟಿ ಉಂಟಾಗಲು ಪ್ರಮುಖ ಕಾರಣವೆಂದರೆ ವೇಗವಾಗಿ ಊಟ ಮಾಡುವುದು. ಇದರಿಂದ ಆಹಾರವೂ ಸರಿಯಾಗಿ ಜೀರ್ಣವಾಗುವುದಿಲ್ಲ. ಆದ್ದರಿಂದ ಚಯಾಪಯ ಕ್ರಿಯೆ ಸರಿಯಾಗಿ ಇರಬೇಕೆಂದರೆ ನಿಧಾನವಾಗಿ ಊಟ ಮಾಡಿ.
ಇದರಿಂದ ಆಹಾರ ಜೀರ್ಣವಾಗಿ ದೇಹಕ್ಕೆ ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಅಲ್ಲದೆ ಸರಿಯಾದ ಸಮಯಕ್ಕೆ ಊಟ ಮಾಡುವುದು ಕೂಡ ಅಷ್ಟೇ ಮುಖ್ಯವಾಗಿರುತ್ತದೆ.
1 ಚಮಚ ತುಪ್ಪ ಊಟಕ್ಕಿರಲಿ
ಪ್ರತಿನಿತ್ಯ ಊಟ ಆರಂಭಿಸುವ ಮೊದಲು ಒಂದು ಚಮಚ ತುಪ್ಪವನ್ನು ಅನ್ನಕ್ಕೆ ಹಾಕಿಕೊಂಡು ಅದಕ್ಕೆ ಚಿಟಿಕೆ ಉಪ್ಪು ಸೇರಿಸಿ ಸೇವಿಸುತ್ತಿದ್ದರೆ ಜೀರ್ಣಶಕ್ತಿ ಉತ್ತಮವಾಗುತ್ತದೆ. ಅಲ್ಲದೆ ದೇಹಕ್ಕೆ ಶಕ್ತಿಯೂ ದೊರೆಯುತ್ತದೆ.
ತುಪ್ಪದ ಸೇವನೆಯಿಂದ ಮೂಳೆಗಳು ಬಲವಾಗುತ್ತದೆ. ಜೊತೆಗೆ ಉತ್ತಮ ಪೋಷಕಾಂಶವೂ ದೊರಕುತ್ತದೆ.
ನೀರಿನ ಸೇವನೆ ಹೀಗಿರಲಿ
ಆಹಾರ ಸೇವನೆ ಎಷ್ಟು ಮುಖ್ಯವೋ ನೀರನ್ನು ಕುಡಿಯುವುದು ಕೂಡ ಅಷ್ಟೇ ಮುಖ್ಯವಾಗಿರುತ್ತದೆ. ಆಹಾರ ಸರಿಯಾಗಿ ಜೀರ್ಣವಾಗಲು ನೀರು ಕೂಡ ಪ್ರಮುಖವಾಗಿರುತ್ತದೆ.
ಆಯುರ್ವೇದ ಪದ್ಧತಿ ಹೇಳುವ ಪ್ರಕಾರ ಊಟಕ್ಕಿಂತ 10 ನಿಮಿಷ ಮೊದಲು ನೀರನ್ನು ಕುಡಿದರೆ ಜೀರ್ಣಕ್ರಿಯೆ ಸರಿಯಾಗುತ್ತದೆ ಜೊತೆಗೆ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.
ಅದೇ ರೀತಿ ಊಟದ ನಡುವೆ ನೀರನ್ನು ಕುಡಿದರೆ ತೂಕವನ್ನು ಸಮತೋಲನದಲ್ಲಿ ಇರಿಸಿಕೊಳ್ಳಲು ಸಹಾಯ ಮಾಡುತ್ತದೆ. ಊಟದ ನಂತರ ನೀರನ್ನು ಕುಡಿದರೆ ದೇಹದ ತೂಕ ಹೆಚ್ಚುತ್ತದೆ.