ಉಡುಪಿ: ಬೈರಂಪಳ್ಳಿ ಪಂಚಾಯತ್ ವ್ಯಾಪ್ತಿಯಲ್ಲಿ ಕಾಮಗಾರಿ ಮಾಡದೇ ಬಿಲ್ ಮಂಜೂರು ಮಾಡಿ ಭ್ರಷ್ಟಾಚಾರ ಮೆರೆದ ಘಟನೆ ನಡೆದಿದೆ.
ಸಾಂತ್ಯಾರು ಗೋಪಾಲಕೃಷ್ಣ ಮಠದ ತಡೆಗೋಡೆ ರಚನೆ ಹಾಗೂ ರಸ್ತೆ ಅಭಿವೃದ್ಧಿ ಹೆಸರಿನಲ್ಲಿ ಕಾಮಗಾರಿ ನಿರ್ವಹಿಸದೆ ಗುತ್ತಿಗೆದಾರ ಪ್ರಶಾಂತ್ ಬೈರಂಪಳ್ಳಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯೊಂದಿಗೆ ಸೇರಿಕೊಂಡು ಒಳಒಪ್ಪಂದ ಮಾಡಿ ಭ್ರಷ್ಟಾಚಾರ ಎಸಗುತ್ತಿರುವ ಆರೋಪ ಕೇಳಿಬಂದಿದೆ. ಬೈರಂಪಳ್ಳಿಯ ಪಂಚಾಯತ್ ಸದಸ್ಯ ಸಂತೋಷ್ ಕುಮಾರ್ ಈ ಬಗ್ಗೆ ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಬೈರಂಪಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಾಗೂ ಪಂಚಾಯತ್ನಲ್ಲಿ ನಡೆಯುವ ಅವ್ಯವಹಾರ ಮತ್ತು ಕಳಪೆ ಕಾಮಗಾರಿಯ ಬಗ್ಗೆ ಈ ಹಿಂದೆಯೂ ದೂರುಗಳು ಕೇಳಿಬಂದಿದ್ದವು. ಈಗ ಜೈರಂಪಳ್ಳಿ ಗ್ರಾಮ ಪಂಚಾಯತ್ನ 2020-21ನೇ ಸಾಲಿನ 15 ಹಣಕಾಸು ಯೋಜನೆಯಡಿಯಲ್ಲಿ ಮಂಜೂರುಗೊಂಡ ಉಡುಪಿ ತಾಲೂಕು ಬೈರಂಪಳ್ಳಿ ಗ್ರಾಮ ಪಂಚಾಯತ್ ಸಾಂತ್ಯಾರು ಗೋಪಾಲ ಕೃಷ್ಣ ಮಠದ ರಸ್ತೆ ಅಭಿವೃದ್ಧಿ ಮತ್ತು ತಡೆಗೋಡೆ ರಚನೆ ಎಂಬ ಕಾಮಗಾರಿಯನ್ನು ಇಡಲಾಗಿತ್ತು.
ಆದರೆ ಕಾಮಗಾರಿಯು ಅನುಷ್ಠಾನಗೊಳ್ಳದೇ ಯಾವುದೇ ಕಾಮಗಾರಿಯನ್ನು ನಿರ್ವಹಿಸದೇ ಬಿಲ್ ಅನ್ನು ಪಾವತಿಸಿರುವುದು ಕಂಡು ಬಂದಿದೆ. ಇದು ಗುತ್ತಿಗೆದಾರ ಪ್ರಶಾಂತ್ ಬೈರಂಪಳ್ಳಿ ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಯ ಇಬ್ಬರ ನಡುವಿನ ಒಪ್ಪಂದದ ನಂತರ ಈ ಭ್ರಷ್ಟಚಾರ ನಡೆದಿದೆ ಎಂದು ಬೈರಂಪಳ್ಳಿಯ ಪಂಚಾಯತ್ ಸದಸ್ಯ ಸಂತೋಷ್ ಕುಮಾರ್ ಆರೋಪಿಸಿದ್ದಾರೆ,
ಈ ಬಗ್ಗೆ ಸಾರ್ವಜನಿಕರು ಅಧಿಕಾರಿಯಲ್ಲಿ ಪ್ರಶ್ನಿಸಿದಾಗ ಅಧಿಕಾರಿಯು ನಿಮಗೆ ಏಕೆ ಬೇಕು ಅದೆಲ್ಲಾ?, ಬೆಕ್ಕಿಗೆ ಗಂಟೆ ಕಟ್ಟಿದವರು ಯಾರು ಎಂಬಿತ್ಯಾದಿ ಉಡಾಫೆ ಉತ್ತರವನ್ನು ನೀಡಿದ್ದಾರೆ. ಈ ಬಗ್ಗೆ ಮಾಹಿತಿ ದೊರಕಿದಾಗ ಪಂಚಾಯತ್ನಿಂದ ಈ ಕಾಮಗಾರಿಯ ಸಂಪೂರ್ಣ ಅಡಕ ದಾಖಲೆಗಳನ್ನು ತಕ್ಷಣ ಪಡೆದಾಗ ಕಾಮಗಾರಿಯನ್ನು ನಡೆಸದೇ ಗುತ್ತಿಗೆದಾರ ಪ್ರಶಾಂತ್ ಬೈರಂಪಳ್ಳಿಯೊಂದಿಗೆ ಸೇರಿಕೊಂಡು 2,39,175 ರೂಪಾಯಿಯನ್ನು ಪಾವತಿಸಿರುವುದು ಕಂಡುಬಂದಿರುತ್ತದೆ ಮತ್ತು ಅದರಲ್ಲಿ ಕಾಮಗಾರಿಯ ಯಾವುದೇ ಹಂತದ ಪೋಟೋವನ್ನು ಲಗೀಕರಿಸುವುದಿಲ್ಲ.
ಈ ಬಗ್ಗೆ ಸ್ಥಳ ಪರಿಶೀಲನೆ ಮಾಡಿದಾಗ ಅಲ್ಲಿ ಯಾವುದೇ ಉಲ್ಲೇಖಿಸಿದ ಕಾಮಗಾರಿ ನಡೆಯದಿರುವುದು ಗಮನಕ್ಕೆ ಬಂದಿರುತ್ತದೆ ಮತ್ತು ರಸ್ತೆ ಕಾಮಗಾರಿಯನ್ನು ಬೇರೆ ಗುತ್ತಿಗೆದಾರರು 15,00,000/- ವೆಚ್ಚದಲ್ಲಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ ಉಡುಪಿ ಜಿಲ್ಲೆ ಇದರ ಯೋಜನೆಯಡಿಯಲ್ಲಿ ಟೆಂಡರ್ ಪ್ರಕ್ರಿಯೆಯಲ್ಲಿ ಪೂರ್ಣಗೊಳಿಸಿದ್ದು, ಅದರ ಸಂಪೂರ್ಣ ದಾಖಲೆಗಳು ಲಭ್ಯವಿರುತ್ತದೆ.
ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ದೂರು ನೀಡುತ್ತಿದ್ದಂತೆ ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನವೀನ್ ಭಟ್ ರವರ ನೇತೃತ್ವದಲ್ಲಿ ಉಡುಪಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ತನಿಖೆಯನ್ನು ನಡೆಸಿದರು. ಅಂದಾಜು ಪಟ್ಟಿಯಲ್ಲಿ ಇರುವ ಕಾಮಗಾರಿ ಸ್ಥಳದಲ್ಲಿ ವಾಸ್ತವಿಕವಾಗಿ ಇಲ್ಲದ ಕಾರಣ ಸ್ಥಳೀಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು 15ನೇ ಹಣಕಾಸು ಯೋಜನೆಯ ಹಣವನ್ನು ಯಾಕೆ ದುರುಪಯೋಗ ಮಾಡಿದಿರಿ ಎಂದು ಪ್ರಶ್ನಿಸಿದರು.
ಇದಲ್ಲದೆ ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ನಿಸ್ಪಕ್ಷ ತನಿಖಾ ವರದಿಯೊಂದಿಗೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಯವರು ಆಶ್ವಾಸನೆ ನೀಡಿದ್ದಾರೆ. ಇಲ್ಲದೇ ಹೋದಲ್ಲಿ ಗ್ರಾಮಸ್ಥರ ತೆರಿಗೆ ಹಣವನ್ನು ಲೂಟಿ ಮಾಡಿದ ಭ್ರಷ್ಟಾಚಾರಿಗಳ ವಿರುದ್ಧ ಗ್ರಾಮಸ್ಥರೊಂದಿಗೆ ಸೇರಿ ಉಗ್ರ ಹೋರಾಟ ಮಾಡುವುದಾಗಿ ಗ್ರಾಂ.ಪ ಸದಸ್ಯರು, ಶ್ರಮಿಕ ತರುಣರ ತಂಡದ ಸಂಸ್ಥಾಪಕರು ಸಂತೋಷ್ ಕುಮಾರ್ ಬೈರಂಪಳ್ಳಿ ಎಚ್ಚರಿಕೆಯನ್ನು ನೀಡಿದ್ದಾರೆ.