ಉಡುಪಿ: ಖಾಸಗಿ ಬ್ಯಾಂಕಿನ ಲೀಗಲ್ ಆಫೀಸರ್ರೊಬ್ಬರ ಮೃತದೇಹ ಮನೆಯ ಕೊಠಡಿಯಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ದಾರುಣ ಘಟನೆ ಉಡುಪಿ ನಗರದ ವಾದಿರಾಜ ರಸ್ತೆಯಲ್ಲಿ ನಡೆದಿದೆ.
ಖಾಸಗಿ ಬ್ಯಾಂಕಿನ ಲೀಗಲ್ ಆಫೀಸರ್ ರಾಜಗೋಪಾಲ್ ಸಾಮಗ (42) ಮೃತ ದುರ್ದೈವಿಯಾಗಿದ್ದಾರೆ .
ನಿವೃತ್ತ ಪೊಲೀಸ್ ಕೃಷ್ಣ ಸಾಮಗ ಅವರ ಮಗನಾಗಿದ್ದು ಇವರ ಪತ್ನಿಯೂ ಉದ್ಯೋಗಿಯಾಗಿದ್ದಾರೆ. ಇವರಿಗೆ ಒಂದೂವರೆ ವರ್ಷದ ಮಗ ಇದ್ದಾನೆ. ಬ್ಯಾಂಕಿನ ಹೈದರಬಾದ್ ಶಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಇವರು, ಕೆಲವು ಸಮಯಗಳ ಹಿಂದೆ ಮಂಗಳೂರಿಗೆ ವರ್ಗಾವಣೆಗೊಂಡು ಬಂದಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಇವರು, ಮನೆಯಿಂದಲೇ ಕೆಲಸ ಮಾಡುತ್ತಿದ್ದರೆನ್ನಲಾಗಿದೆ. ಇವರು ಸಂಜೆ ಚಹಾ ಕುಡಿದು, ಮಹಡಿ ಮೇಲಿನ ಕೋಣೆಗೆ ತೆರಳಿ ಲ್ಯಾಪ್ಟಾಪ್ನಲ್ಲಿ ಕೆಲಸ ಮಾಡಿಕೊಂಡಿದ್ದರು. ಕೊಠಡಿಯ ಕಿಟಕಿಯಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ನೆರೆಮನೆಯವರು ಸಾಮಗರ ಮನೆಯವರಿಗೆ ಮಾಹಿತಿ ನೀಡಿದರು. ಕೂಡಲೇ ಅಗ್ನಿ ಶಾಮಕದಳ ಹಾಗೂ ಪೊಲೀಸರಿಗೆ ಮಾಹಿತಿ ನೀಡಲಾಯಿತು.
ಕೋಣೆಯ ಬಾಗಿಲು ಮುರಿದು ಪರಿಶೀಲಿಸಿದಾಗ ರಾಜ ಗೋಪಾಲ್ ಸಾಮಗ ಬೆಂಕಿಯಿಂದ ಸುಟ್ಟು ಮೃತಪಟ್ಟಿರುವುದು ಕಂಡುಬಂದಿದೆ.
ಅನಾರೋಗ್ಯದಿಂದ ಬಳಲುತ್ತಿದ್ದ ಇವರು, ಇದೇ ಚಿಂತೆಯಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಪೊಲೀಸರು ಶಂಕಿಸಿದ್ದರೆ. ರಾಜಗೋಪಾಲ ಕೆಲಸ ಮಾಡುತ್ತಿದ್ದಾಗ ಲ್ಯಾಪ್ಟಾಪ್ ಸಿಡಿದು ಅಥವಾ ಬೆಂಕಿ ಹಚ್ಚಿಕೊಂಡು ಮೃತಪಟ್ಟಿರಬಹುದೆಂದು ಮನೆಯವರು ದೂರಿದ್ದಾರೆ. ಸ್ಥಳಕ್ಕೆ ಉಡುಪಿ ನಗರ ಠಾಣಾ ನಿರೀಕ್ಷಕ ಪ್ರಮೋದ್ ಕುಮಾರ್ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಮೃತರು ತಂದೆ, ತಾಯಿ, ಪತ್ನಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ. ಈ ಬಗ್ಗೆ ಮೃತರ ತಂದೆ ಕೃಷ್ಣ ಸಾಮಗ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.