ಉಡುಪಿ: ಶ್ರಮಿಕ ತರುಣರ ತಂಡ ಬೈರಂಪಳ್ಳಿ ಸರಕಾರಿ ಸೌಲಭ್ಯಗಳನ್ನು ಜನಸಾಮಾನ್ಯರಿಗೆ ಮುಟ್ಟಿಸುವ ಶ್ರಮಿಕರ ಪ್ರಯತ್ನ ಸಂಪನ್ನಗೊಂಡಿದೆ. ಇಂದು 41ನೇ ಶೀರೂರಿನ ಒಂದನೇ ವಾರ್ಡಿನ ಹಾಲಕ್ಕಿ ಸರಕಾರಿ ಶಾಲಾ ವಠಾರದಲ್ಲಿ ಮೆಸ್ಕಾಂ ಇಲಾಖೆಯ ನೇತೃತ್ವದಲ್ಲಿ ಹಾಗು ಬೈರಂಪಳ್ಳಿ ಗ್ರಾಮ ಪಂಚಾಯತ್ ಸದಸ್ಯರಾದ ಸಂತೋಷ್ ಕುಮಾರ್ ಬೈರಂಪಳ್ಳ ಯವರ ಅಧ್ಯಕ್ಷೀಯ “ವಿದ್ಯುತ್ ಅದಾಲತ್” ಕಾರ್ಯಕ್ರಮವನ್ನು 41ನೇ ಶೀರೂರಿನ ಗ್ರಾಮಸ್ಥರ ಆಸಕ್ತಿ, ಉತ್ಸಾಹ ಮತ್ತು ಲಿಖಿತ ಅರ್ಜಿಗಳೊಂದಿಗೆ ಯಶಸ್ವಿಯಾಗಿ ನಡೆಸಲಾಯಿತು.
ಗ್ರಾಮಸ್ಥರು ಮೆಸ್ಕಾಂ ಸಂಬಂಧ ಪಟ್ಟ ವಿದ್ಯುತ್ ಸಂಪರ್ಕ, ವಿದ್ಯುತ್ ಸರಬರಾಜು, ಯೂನಿಟ್ ವೆಚ್ಚ ಮತ್ತು ಬಿಲ್ ಪಾವತಿ, ವೋಲ್ಟೇಜ್ ಕೊರತೆ ಸಮಸ್ಯೆಗಳನ್ನು ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಶಾಂತ ಪುತ್ರನ್ ಮತ್ತು ಸೆಕ್ಷನ್ ಆಫೀಸರ್ ಬಾಲಕೃಷ್ಣ ಅವರೊಂದಿಗೆ ಚರ್ಚಿಸಿ ಬಗೆಹರಿಸಿಕೊಂಡರು. ಇತರ ಸಮಸ್ಯೆಗಳನ್ನು ಗಂಭೀರತೆಯಿಂದ ಪರಿಗಣಿಸಿ ವಿಲೇವಾರಿ ಮಾಡುವ ಆಶ್ವಾಸನೆಯನ್ನು ಅಧಿಕಾರಿಗಳು ನೀಡಿದರು. ಸಂತೋಷ್ ಕುಮಾರ್ ಬೈರಂಪಳ್ಳಿಯವರು ಮಾತನಾಡಿ ಗ್ರಾಮಸ್ಥರು ತಮ್ಮ ಸಮಸ್ಯೆಗಳನ್ನು ತಾವೇ ಸ್ವತಃ ಮುಂದೆ ನಿಂತು ಸ್ವಾವಲಂಬಿಯಾಗಿ ತಮ್ಮ ಆತ್ಮವಿಶ್ವಾಸ ಹೆಚ್ಚಿಸಿಕೊಂಡು ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳ ಗಮನಕ್ಕೆ ನೇರವಾಗಿ ತಂದು ಬಗೆಹರಿಸಿಕೊಳ್ಳಬೇಕು, ಇದರಿಂದ ಹಳ್ಳಿಯ ಜನರು ಮಾಹಿತಿವುಳ್ಳವರಾಗಿ ಗ್ರಾಮವು ಸಂಪೂರ್ಣ ಅಭಿವೃದ್ಧಿಯತ್ತ ಸಾಗಲು ಸಹಕಾರವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಉಮೇಶ್ ನಾಯಕ್, ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶಶಿಕಲಾ ಪೂಜಾರಿ, ಗ್ರಾಮ ಪಂಚಾಯತ್ ಸದಸ್ಯರಾದ ವಿಜಯಕುಮಾರ್,ಮೆಸ್ಕಾಂ ಸಿಬ್ಬಂದಿಗಳಾದ ಅಜಿತ್, ಪ್ರಶಾಂತ್ ಮತ್ತು ಈರಣ್ಣ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.