ಉಪ್ಪಿನಂಗಡಿ: ಮಗಳನ್ನು ಮದುವೆ ಮಾಡಿ ಕೊಡಲು ನಿರಾಕರಿಸಿದ ವ್ಯಕ್ತಿಯ ಮನೆಗೆ ತಂಡ ಕಟ್ಟಿಕೊಂಡು ನುಗ್ಗಿದ್ದಲ್ಲದೆ, ಮಾರಕಾಯುಧಗಳಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಘಟನೆ ಉಪ್ಪಿನಂಗಡಿ ಬಳಿ ನಡೆದಿದೆ. ಹಲ್ಲೆ ನಡೆಸಿದ 6 ಜನರ ಪೈಕಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಟ್ವಾಳ ತಾಲೂಕು ಬಿಳಿಯೂರು ಗ್ರಾಮದ ಆಯೋಧ್ಯಾ ನಗರ ಎಂಬಲ್ಲಿನ ನಿವಾಸಿ ತಾಹೀರಾ (38) ಎಂಬಾಕೆ ಘಟನೆ ಕುರಿತು ಪೊಲೀಸರಿಗೆ ದೂರು ನೀಡಿದ್ದರು. ಕಳೆದ ಶುಕ್ರವಾರ ರಾತ್ರಿ 11.15 ರ ಸುಮಾರಿಗೆ ಮಹಮ್ಮದ್ ನಿಝಾಮುದ್ದೀನ್ (25) ಬಿನ್ ಶಾಹುಲ್ ಹಮೀದ್ ,ತೌಫೀಕ್(20) ಬಿನ್ ಇಸ್ಮಾಯಿಲ್, ಅಬ್ದುಲ್ ಸಲೀಂ (23) ಬಿನ್ ಮಹಮ್ಮದ್, ಮಹಮ್ಮದ್ ಸಫೀಕ್ (22) ಬಿನ್ ಹಸೈನಾರ್ ಮತ್ತು ನಾಸೀರ್ ಮತ್ತು ಸಮೀರ್ ತಂಡ ಮನೆಗೆ ಅಕ್ರಮ ಪ್ರವೇಶ ಮಾಡಿದ್ದಲ್ಲದೆ, ನನಗೆ ಮತ್ತು ಗಂಡ ಹಾಗೂ ಮಕ್ಕಳಿಗೆ ಅವಾಚ್ಯ ಪದಗಳಿಂದ ಬೈದು, ನನ್ನ ಮೈದುನ ಯೂಸುಫ್ರವರನ್ನು ಫೋನ್ ಮಾಡಿ ಕರೆಯಿಸಿ, ಅವರ ಮೇಲೆ ಹಲ್ಲೆ ನಡೆಸಿದರು.
ಈ ವೇಳೆ ನಾನು ಮತ್ತು ಗಂಡ ಉಸ್ಮಾನ್ರನ್ನು ಬಿಡಿಸಲು ಹೋದಾಗ, ನಿಝಾಮುದ್ದೀನನ್ನು ತಂದಿದ್ದ ಚೂರಿಯಿಂದ ನನ್ನ ಗಂಡ ಉಸ್ಮಾನ್ ಬ್ಯಾರಿಯವರನ್ನು ಕೊಲೆ ಮಾಡುವ ಉದ್ದೇಶದಿಂದ ಅವರ ಎದೆಗೆ ಚೂರಿಯಿಂದ ತಿವಿದ. ಉಳಿದ ಆರೋಪಿಗಳು ದೊಣ್ಣೆ, ಕಲ್ಲು, ಕೈಗಳಿಂದ ಹೊಡೆದು ನಿಮ್ಮೆಲ್ಲರನ್ನೂ ಜೀವ ಸಹಿತ ಬದುಕಲು ಬಿಡುವುದಿಲ್ಲವೆಂದೂ ಬೆದರಿಕೆಯೊಡ್ಡಿದ್ದಾರೆ. ಮಾರಣಾಂತಿಕ ಹಲ್ಲೆಯಿಂದ ಗಾಯಗೊಂಡ ಉಸ್ಮಾನ್ರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಾಹೀರಾ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಉಸ್ಮಾನ್ರವರ ಮಗಳನ್ನು ತನಗೆ ವಿವಾಹ ಮಾಡಿಕೊಡಬೇಕೆಂದು ನಿಝಾಮುದ್ದೀನ್ ಕೋರಿಕೆಯನ್ನು ನಿರಾಕರಿಸಿದ ಕೋಪಕ್ಕೆ ನಿಝಾಮುದ್ದೀನ್ ತಂಡ ಕಟ್ಟಿಕೊಂಡು ಬಂದು ಹಲ್ಲೆಗೈಯಲು ಬಂದಿರುವುದಾಗಿ ದೂರಿನಲ್ಲಿ ಆಪಾದಿಸಲಾಗಿದೆ.
ಪ್ರಕರಣ ದಾಖಲಿಸಿಕೊಂಡ ಉಪ್ಪಿನಂಗಡಿ ಪೊಲೀಸರು ಆರೋಪಿತರ ಪೈಕಿ ನಿಝಾಮುದ್ದೀನ್, ಸಲೀಂ, ತೌಫಿಕ್ ಹಾಗೂ ಶಫೀಕ್ ಎಂಬವರನ್ನು ಬಂಧಿಸಿದ್ದು, ಉಳಿದಿಬ್ಬರ ಪತ್ತೆಗೆ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ತಿಳಿದುಬಂದಿದೆ.