ಉಪ್ಪಿನಂಗಡಿ: ಬೆಳ್ತಂಗಡಿ ತಾಲೂಕಿನ ಇಳಂತಿಲ ಎಂಬಲ್ಲಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ವ್ಯಕ್ತಿಯೊಬ್ಬರಿಗೆ ಗ್ರೆನೇಡ್ ಪತ್ತೆಯಾಗಿದ್ದು, ಬಳಿಕ ಅವರು ಈ ಬಗ್ಗೆ ಉಪ್ಪಿನಂಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ನಿನ್ನೆ ಸಂಜೆ ಇಳಂತಿಲ ಗ್ರಾಮದ ನಿವಾಸಿ ನಿವೃತ್ತ ಯೋಧ ಜಯಕುಮಾರ್ ಪೂಜಾರಿ ಉಪ್ಪಿನಂಗಡಿಯಿಂದ ಮನೆಯ ಕಡೆಗೆ ನಡೆದುಕೊಂಡು ಬರುವಾಗ ಮನೆಯ ದಾರಿಯ ಇಳಿಜಾರಿನ ತಂತಿ ಬೇಲಿಯ ಎಡ ಭಾಗದಲ್ಲಿ ಹರಡಿದ ಹಾಗೆ ಗ್ರೆನೇಡ್ ರೀತಿಯ ಐದು ವಸ್ತುಗಳು ಕಂಡು ಬಂದಿದೆ.
ಅದರಲ್ಲಿ ಒಂದು ಗ್ರೆನೇಡ್ ಹಳದಿ ಬಣ್ಣದ ಪ್ಲಾಸ್ಟಿಕ್ ಕವರಿನ ಒಳಗಡೆ ಇದ್ದು ಉಳಿದ ನಾಲ್ಕು ಗ್ರೇನೇಡ್ ಗಳು ಅಲ್ಲಿಯೇ ಹರಡಿಕೊಂಡಿರುವ ಹಾಗೆ ಬಿದ್ದುಕೊಂಡಿತ್ತು. ಜಯಕುಮಾರ್ ಪೂಜಾರಿ ಅವರು ಭೂಸೇನಾ ರೆಜಿಮೆಂಟಿನಲ್ಲಿ ಎಸ್ ಸಿ ಒ ಆಗಿ ನಿವೃತ್ತಿ ಹೊಂದಿರುವುದರಿ0ದ ಈ ವಸ್ತುಗಳು ಗ್ರೆನೇಡ್ ಎಂಬುದಾಗಿ ಅವರಿಗೆ ತಿಳಿದುಬಂದಿದೆ.
ಈ ಗ್ರೆನೇಡ್ ಗಳನ್ನು ಕಾಡು ಪ್ರಾಣಿಗಳು ಅಥವಾ ಇತರ ಪ್ರಾಣಿಗಳು ಬೇರೆಡೆಗೆ ಕಚ್ಚಿಕೊಂಡು ಹೋಗಿ ಸಾರ್ವಜನಿಕರಿಗೆ ಅಪಾಯವಾಗಬಹುದೆಂಬುದನ್ನು ಅರಿತ ಅವರು ಮನೆಯಂಗಳದ ಮೂಲೆಯಲ್ಲಿಟ್ಟು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಗ್ರಾನೈಡ್ ವಸ್ತುಗಳನ್ನು ಯಾರೋ ಅಪರಿಚಿತ ದುಷ್ಕರ್ಮಿಗಳು ಬರುವ ದಾರಿಯಲ್ಲಿ ಹಾಕಿದ್ದು, ಈ ಕೃತ್ಯವೆಸಗಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ.