ಉಳ್ಳಾಲ: ಮನೆಯೊಂದರಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿ, ಹೆಂಚಿನ ಮನೆಯು ಸಂಪೂರ್ಣ ಬೆಂಕಿಗಾಹುತಿಯಾದ ಘಟನೆ ಹರೇಕಳ ಗ್ರಾಮದ ದೇರಿಕಟ್ಟೆ ನಿವಾಸಿ ದಿ. ಅಬ್ದುಲ್ ಖಾದ್ರಿ ಅವರ ಪತ್ನಿ ನೆಬಿಸಾ ಅವರ ಮನೆಯಲ್ಲಿ ಸಂಭವಿಸಿದೆ.
ಮನೆ ಮಂದಿ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ರಂಝಾನ್ ಉಪವಾಸದ ಪ್ರಯುಕ್ತ ಇಫ್ತಾರ್’ನಲ್ಲಿ ನಿರತವಾಗಿದ್ದ ಮನೆಯವರ ಸಮಯ ಪ್ರಜ್ಞೆಯಿಂದ ಪ್ರಾಣ ಹಾನಿಯಾಗಿಲ್ಲ, ಆದರೆ ಮನೆ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದ್ದು, ಮನೆಯ ಪೀಠೋಪಕರಣಗಳು, ಪಾತ್ರೆಗಳು, ವಿದ್ಯುತ್ ಉಪಕರಣಗಳು, ಗೃಹ ಉಪಯೋಗಿ ಪರಿಕರಗಳು, ಮಕ್ಕಳ ಶಾಲಾ ಪಠ್ಯ ಪುಸ್ತಕ ಇನ್ನಿತರ ವಸ್ತುಗಳು ಸಂಪೂರ್ಣ ಭಸ್ಮಗೊಂಡಿದೆ.
ಘಟನೆಯ ಬಗ್ಗೆ ಮಾಹಿತಿ ಪಡೆದು ಶಾಸಕ ಯು ಟಿ ಖಾದರ್ ಭೇಟಿ ನೀಡಿದ್ದು, ಅದೇ ರೀತಿ ಸ್ಥಳೀಯ ಪಂಚಾಯತ್ ಪ್ರತಿನಿಧಿಗಳಾದ ರೆಹನಾ ನಝೀರ್, ಅನೀಸ್, ಹನೀಫ್, ರೆಹನಾ ಮುಹಮ್ಮದ್, ಅಬ್ದುಲ್ ಬಶೀರ್ ಎಸ್ .ಎಂ. ಮತ್ತಿತರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕದಳ ಭೇಟಿ ನೀಡಿ, ಸ್ಥಳೀಯರೊಂದಿಗೆ ಸೇರಿಕೊಂಡು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.