ಉಳ್ಳಾಲ: ಕೊಲ್ಯದಲ್ಲಿ ಭಾನುವಾರ ರಾತ್ರಿ ಸಂಭವಿಸಿದ್ದ ಭೀಕರ ಕಾರು ಅಪಘಾತದಲ್ಲಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಂಭೀರ ಗಾಯಗೊಂಡಿದ್ದ ಮತ್ತೋರ್ವ ಯುವಕನೂ ಸೋಮವಾರ ಮಧ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಖಾಸಗಿ ಮೃತಪಟ್ಟಿದ್ದಾರೆ.
ಕಾಸರಗೋಡು ಜಿಲ್ಲೆಯ ಉಪ್ಪಳ ಹಿದಾಯತ್ ನಗರ ನಿವಾಸಿ ಬಾಷರ್ ಅಹಮ್ಮದ್(22) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಯುವಕ.
ಭಾನುವಾರ ರಾತ್ರಿ ರಾ.ಹೆ 66ರ ಕೊಲ್ಯ ಸಮೀಪದ ಅಡ್ಡದಲ್ಲಿ ಮಂಗಳೂರಿನಿಂದ ತಲಪಾಡಿಗೆ ನಾಲ್ವರು ಪ್ರಯಾಣಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಡಿವೈಡರ್ ಏರಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿ ನಜ್ಜುಗುಜ್ಜಾಗಿತ್ತು. ಡಿಕ್ಕಿಯ ತೀವ್ರತೆಗೆ ಕಬ್ಬಿಣದ ವಿದ್ಯುತ್ ಕಂಬವೇ ಧರೆಗುರುಳಿತ್ತು. ಪರಿಣಾಮ ಸ್ಥಳದಲ್ಲಿಯೇ ಕಾರು ಚಾಲಕ ಮಂಜೇಶ್ವರ ಉದ್ಯಾವರದ ನಿವಾಸಿ ಅಬ್ದುಲ್ ರಿಫಾಯಿ(24) ಮೃತಪಟ್ಟಿದ್ದರು.
ಸೋಮವಾರ ಮೃತಪಟ್ಟ ಬಾಷರ್ ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಬಿಸಿಎ ವಿದ್ಯಾರ್ಥಿಯಾಗಿದ್ದ. ಜ.28ರಂದು ಗಲ್ಫ್ ನಿಂದ ಆಗಮಿಸಿದ್ದ ಮಹಮ್ಮದ್ ರಿಫಾಯಿ ಚಿಕ್ಕಪ್ಪನ ಮಗ ಬಾಷರ್ ಜೊತೆಗೆ ಆತನ ಸಹಪಾಠಿಗಳಾದ ಫಾತಿಮಾ ಹಾಗೂ ರೇವತಿ ಜೊತೆ ಮಂಗಳೂರಿನಿಂದ ತಲಪಾಡಿ ಕಡೆಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು.ಈ ವೇಳೆ ಅಜಾಗರೂಕತೆ, ನಿರ್ಲಕ್ಷದ ಚಾಲನೆಯಿಂದಾಗಿ ಘಟನೆ ಸಂಭವಿಸಿದೆ. ಅಬ್ದುಲ್ ರಿಫಾಯಿ ಕಟ್ಟಡ ಗುತ್ತಿಗೆದಾರ ಸಯ್ಯದ್ ಎಂಬವರ ಪುತ್ರನಾಗಿದ್ದ.ಮೃತರು ತಾಯಿ, ಇಬ್ಬರು ಸಹೋದರರು ಹಾಗೂ ಮೂವರು ಸಹೋದರಿಯರನ್ನು ಅಗಲಿದ್ದಾರೆ.
ಮೃತ ಬಾಷರ್ನ ಸಹೋದರ ರಿಫಾಯಿ ವಿದೇಶದಿಂದ ಬಂದ ಖುಷಿಯಲ್ಲಿ ಬಾಷರ್ ಮತ್ತು ಸಹಪಾರಿಗಳು ಒಟ್ಟಾಗಿದ್ದರು. ಕಾರಿನಲ್ಲಿದ್ದ ವಿದ್ಯಾರ್ಥಿನಿಯರಾದ ರೇವತಿ ಹಾಗೂ ಫಾತಿಮಾ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ, ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.