ಉಳ್ಳಾಲ: ನಸುಕಿನ ವೇಳೆ ಇಬ್ಬರು ಖರ್ತನಾಕ್ ಖದೀಮರು ಕೋಟೆಕಾರಿನ ಕೊರಗಜ್ಜನ ಕಟ್ಟೆಯ ಬಳಿ ನಿಲ್ಲಿಸಿದ ಬೈಕ್ನ್ನು ಕದ್ದೊಯ್ಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಬಗ್ಗೆ ಬೈಕ್ ಮಾಲಕ ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಉಳ್ಳಾಲ ಪೊಲೀಸ್ ಠಾಣೆ ವ್ಯಾಪ್ತಿಯ ಕೋಟೆಕಾರಿನ ಸಾರ್ವಜನಿಕ ಕೊರಗಜ್ಜನ ಕಟ್ಟೆಯ ಬಳಿಯಲ್ಲಿ ಸ್ಥಳೀಯ ವಿನಾಯಕ ಎಲೆಕ್ಟ್ರಿಕಲ್ಸ್ನ ಡಿಜೆ ಪ್ಲೇಯರ್ ರಾಜೇಶ್ ಎಂಬವರು ಒಳ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಬೈಕನ್ನ ಕಳವು ಮಾಡಲಾಗಿದೆ. ಮಂಗಳವಾರ ಮುಂಜಾನೆ ನಸುಕಿನ 1.42ರ ವೇಳೆ ಇಬ್ಬರು ಐನಾತಿ ಕಳ್ಳರು ಬೈಕನ್ನ ಕದ್ದೊಯ್ಯುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಕಳ್ಳರ ಕರಾಮತ್ತಿನ ಸಿಸಿಟಿವಿ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಬೈಕ್ ಮಾಲಕ ರಾಜೇಶ್ ಅವರು ಈ ಬಗ್ಗೆ ಉಳ್ಳಾಲ ಠಾಣೆಗೆ ದೂರು ನೀಡಿದ್ದಾರೆ.
ಕಳೆದ ಶನಿವಾರ ನರಿಂಗಾನದಲ್ಲಿ ನಡೆಯುತ್ತಿದ್ದ ಕಂಬಳಕ್ಕೆ ಬಂದಿದ್ದ ವ್ಯಕ್ತಿಯೋರ್ವರ ಬೈಕ್ ಕಳವಾಗಿದೆ. ಕಂಬಳ ಉತ್ಸವದಲ್ಲಿ ಸಾವಿರಾರು ವಾಹನ ಜಮಾಯಿಸಿದ್ದರಿಂದ ಎಲ್ಲೋ ಬೈಕ್ ಮಿಸ್ ಆಗಿರಬಹುದೆಂದು ಕೊಣಾಜೆ ಪೊಲೀಸರು ಇನ್ನೂ ದೂರು ಸ್ವೀಕರಿಸಿಲ್ಲ ಎಂದು ಬೈಕ್ ಕಳವಾದ ವ್ಯಕ್ತಿ ತಿಳಿಸಿದ್ದಾರೆ, ತೊಕ್ಕೊಟ್ಟಿನ ಬೈಕ್ ಶೋ ರೂಂನಲ್ಲಿ ದುರಸ್ತಿಗೆ ಇರಿಸಿದ್ದ ಬೈಕ್ ಕಳವಾಗಿದ್ದು ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹೀಗಾಗಿ ಬೈಕ್ ಎಗರಿಸುವ ಕೃತ್ಯದಲ್ಲಿ ಒಂದೇ ತಂಡ ಇರುವ ಶಂಕೆಯಿದೆ.
ಐದು ವರುಷದ ಹಿಂದೆ ಕೋಟೆಕಾರಿನ ಕೊರಗಜ್ಜನ ಕಟ್ಟೆಯ ಬಳಿಯ ಉದ್ಯಮಿಯೋರ್ವರ ಮನೆಯಿಂದ ಬುಲೆಟ್ ಒಂದನ್ನು ಕಳ್ಳರು ಎಗರಿಸಿದ್ದರು. ನಂತರ ಮಡಿಕೇರಿಯಲ್ಲಿ ನಂಬರ್ ಪ್ಲೇಟ್ ಬದಲಿಸಿ ತಿರುಗುತ್ತಿದ್ದ ಅದೇ ಬುಲೆಟ್ ಪತ್ತೆಯಾಗಿತ್ತು ಎರಡು ವರ್ಷದ ಹಿಂದೆ ಮತ್ತೆ ಅವರದೇ ಮನೆಯಿಂದ ಬೈಕನ್ನ ಕದ್ದು ರಸ್ತೆಯಲ್ಲಿ ಇರಿಸಲಾಗಿತ್ತು.
ಇದೇ ಸಂದರ್ಭ ಕೊಲ್ಯದ ಮನೆಯೊಂದರಿಂದಲೂ ಬುಲೆಟ್ ಒಂದನ್ನು ಕದ್ದು ರಸ್ತೆಯಲ್ಲಿರಿಸಿದ ಕಳ್ಳರು ದೋಚಲು ಪ್ಲಾನ್ ಹಾಕಿದ್ದಾಗ ಅವರ ಪಿಕ್ ಅಪ್ ವಾಹನವೇ ಕೆಟ್ಟು ಕೈಕೊಟ್ಟಿತ್ತಂತೆ. ಓಮಿನಿಯಲ್ಲಿ ತಲವಾರು ಹಿಡಿದ ಗ್ಯಾಂಗ್ ಒಂದು ಮನೆಗಳ ಒಳಗಡೆ, ಬಾರ್ ಮಳಿಗೆಗಳ ಮುಂದೆ ನಿಲ್ಲಿಸಿದ್ದ ಬೈಕ್ ಗಳನ್ನು ಕದ್ದು ರಸ್ತೆ ಬದಿ ತಂದು ನಿಲ್ಲಿಸುತ್ತದೆ. ಹಿಂದಿನಿಂದ ಬರುವ ಪಿಕ್ ಅಪ್ ವಾಹನದಲ್ಲಿ ಕದ್ದ ಬೈಕ್ ಗಳನ್ನ ವ್ಯವಸ್ಥಿತವಾಗಿ ಕೇರಳಕ್ಕೆ ಸಾಗಿಸುವ ಜಾಲವನ್ನುಸ್ಥಳೀಯ ಉದ್ಯಮಿ ಈ ಹಿಂದೆಯೇ ಸಿಸಿಟಿವಿ ದಾಖಲೆಗಳಿಂದ ಕಂಡು ಹಿಡಿದಿದ್ದರಂತೆ.
ಇದೀಗ ಕೋಟೆಕಾರಲ್ಲಿ ಮತ್ತೆ ಬೈಕ್ ಕಳ್ಳತನ ನಡೆದಿದ್ದು ಸಿಸಿಟಿವಿಯಲ್ಲಿ ಬೈಕ್ ಕಳ್ಳರ ಚಹರೆ ಸರಿಯಾಗಿ ಕಾಣುತ್ತಿದ್ದು ಉಳ್ಳಾಲ ಪೊಲೀಸರು ಇವರ ಹೆಡೆಮುರಿ ಕಟ್ಟಬೇಕಿದೆ.