ಚೆನ್ನೈ: ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 6 ರನ್ ಗಳ ರೋಚಕ ಗೆಲುವು ಪಡೆದುಕೊಂಡಿದ್ದು, ಆ ಮೂಲಕ ಟೂರ್ನಿಯಲ್ಲಿ 2ನೇ ಗೆಲುವು ಪಡೆದುಕೊಂಡಿದೆ.
150 ರನ್ಗಳ ಗುರಿ ಬೆನ್ನಟ್ಟಿದ ಹೈದರಾಬಾದ್ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 143 ರನ್ಗಳಷ್ಟೇ ಗಳಿಸಿತು. ಆರ್ಸಿಬಿ ಪರ ಉತ್ತಮ ಬೌಲಿಂಗ್ ಪ್ರದರ್ಶನ ತೋರಿದ ಶಹಬಾಜ್ ಅಹ್ಮದ್ ಒಂದೇ ಓವರಿನಲ್ಲಿ ಹೈದರಾಬಾದ್ ತಂಡದ ಪ್ರಮುಖ ಮೂವರು ಆಟಗಾರರ ವಿಕೆಟ್ ಪಡೆದು ಪಂದ್ಯಕ್ಕೆ ಟ್ವಿಸ್ಟ್ ಕೊಟ್ಟರು.
150 ರನ್ಗಳ ಟಾರ್ಗೆಟ್ ಪಡೆದ ಹೈದರಾಬಾದ್ ತಂಡಕ್ಕೆ ಮೊದಲ ಶಾಕ್ ಕೊಟ್ಟ ಸಿರಾಜ್ ಆರಂಭಿಕ ಸಹಾರನ್ನು ಕೇವಲ 1 ರನ್ಗೆ ಪೆವಿಲಿಯನ್ಗೆ ಅಟ್ಟಿದ್ದರು. ಆದರೆ ಆರಂಭಿಕ ಆಘಾತ ಎದುರಿಸಿದ ತಂಡಕ್ಕೆ ನಾಯಕ ವಾರ್ನರ್, ಮನೀಶ್ ಪಾಂಡೆ ಜೋಡಿ ಚೇತರಿಕೆ ನೀಡಿದರು. ಈ ಜೋಡಿ 2ನೇ ವಿಕೆಟ್ಗೆ 69 ಎಸೆತಗಳಲ್ಲಿ 83 ರನ್ ಗಳಿಸಿತ್ತು. ಉತ್ತಮ ಬ್ಯಾಟಿಂಗ್ನೊಂದಿಗೆ ಮುನ್ನುಗುತ್ತಿದ್ದ ತಂಡಕ್ಕೆ ಶಹಬಾಜ್ ಅಹ್ಮದ್ ಶಾಕ್ ನೀಡಿದರು.
ಒಂದೇ ಓವರಿನಲ್ಲಿ ಮೂರು ವಿಕೆಟ್ ಪಡೆದ ಶಹಬಾಜ್ ಅಹ್ಮದ್ ಪಂದ್ಯವನ್ನು ಆರ್ಸಿಬಿ ಕಡೆ ಟರ್ನ್ ಮಾಡಲು ಯಶಸ್ವಿಯಾದರು. ಅಂತಿಮ ಹಂತದಲ್ಲಿ ರಶೀದ್ ತಂಡಕ್ಕೆ ಗೆಲುವು ತಂದು ಕೊಡಲು ಯತ್ನಸಿದರೂ ಅಂತಿಮವಾಗಿ 17 ರನ್ಗಳಿಗೆ ವಿಕೆಟ್ ಒಪ್ಪಿಸಿ ನಿರ್ಗಮಿಸಿದರು. ಇದರೊಂದಿಗೆ ಆರ್ಸಿಬಿ ಗೆಲುವು ಖಚಿತವಾಗಿತ್ತು.
ಅಂತಿಮ 5 ಓವರ್ಗಳಲ್ಲಿ ರನ್ಗಳಿಸಲು ಸೆಣಸಾಡಿದ ಹೈದರಾಬಾದ್ ಬ್ಯಾಟ್ಸ್ಮನ್ಗಳು 28 ರನ್ಗಳಿಸಿ 7 ವಿಕೆಟ್ ಕೈ ಚೆಲ್ಲಿದ್ದರು. ಆರ್ಸಿಬಿ ಪರ ಶಹಬಾಜ್ ಅಹ್ಮದ್ 2 ಓವರ್ ಬೌಲ್ ಮಾಡಿ ಮೂರು ವಿಕೆಟ್ ಪಡೆದರೆ, ಸಿರಾಜ್ ಮತ್ತು ಹರ್ಷಲ್ ಪಟೇಲ್ ತಲಾ 2 ವಿಕೆಟ್, ಜೆಮೀಸನ್ ಒಂದು ವಿಕೆಟ್ ಪಡೆದು ತಂಡದ ಗೆಲುವಿಗೆ ಕಾರಣ ನೀಡಿದರು.