ದಾವಣಗೆರೆ: ಬೆಣ್ಣೆ ನಗರಿ ದಾವಣಗೆರೆಯಲ್ಲಿ ಹಾಡಹಗಲೇ ಭೀಕರ ಕೊಲೆಯಾದ ಘಟನೆ ನಡೆದಿದೆ. ತನ್ನ ಪಾಡಿಗೆ ಕೆಲಸಕ್ಕೆ ಹೋಗುತ್ತಿದ್ದ ಯುವತಿಯನ್ನು ನಡು ರಸ್ತೆಯಲ್ಲಿ ತಡೆದು ನಿಲ್ಲಿಸಿ, ಮನಬಂದಂತೆ ಚುಚ್ಚಿ ಕೊಂದಿರುವ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ.
ದಾವಣಗೆರೆ ನಗರದ ಬಿ.ಜೆ ಬಡಾವಣೆಯ ಚರ್ಚ್ ಮುಂಭಾಗ ಯುವತಿಯನ್ನು ಕೊಂದಿರುವ ಪಾಗಲ್ ಪ್ರೇಮಿ, ಬಳಿಕ ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆ ಸೇರಿದ್ದಾನೆ.
ಇಲ್ಲಿನ ವಿನೋಭ ನಗರದ ನಿವಾಸಿ ಚಾಂದ್ ಸುಲ್ತಾನಾ ದಾವಣಗೆರೆ ವಿವಿಯಲ್ಲಿ ಎಂಕಾಂ ಪದವಿ ಮುಗಿಸಿ ತೆರಿಗೆ ಸಲಹೆಗಾರರ ಬಳಿ ಸಿ.ಎ.ಗಾಗಿ ತರಬೇತಿ ಪಡೆಯುತ್ತಿದ್ದಳು. ಇದೇ ಕಚೇರಿಯಲ್ಲಿನ ಹುಡುಗನ ಜೊತೆಗೆ ಇತ್ತೀಚಿಗೆ ನಿಶ್ಚಿತಾರ್ಥ ಸಹ ಮಾಡಿಕೊಂಡಿದ್ದಳು.
ಅಷ್ಟರಲ್ಲೇ ಸಾದತ್ ಅಲಿಯಾಸ್ ಚಾಂದ್ ಫೀರ್ ಎಂಬವನು, ಚಾಂದ್ ಸುಲ್ತಾನಾಳನ್ನ ಮದುವೆಯಾಗಲು ಬಯಸಿದ್ದು , ಕುಟುಂಬದ ಸದಸ್ಯರು ಹಾಗೂ ಸುಲ್ತಾನಾ ನಿರಾಕರಿಸಿ ಮತ್ತೊಬ್ಬ ಹುಡುಗನ ಜೊತೆಗೆ ನಿಶ್ಚಿತಾರ್ಥ ಮಾಡಿದ್ದರು. ಇದರಿಂದ ಸಾದತ್ ಕೋಪಗೊಂಡಿದ್ದಾನೆ. ಮರುದಿನ ಸುಲ್ತಾನ ತನ್ನ ಪಾಡಿಗೆ ಕೆಲಸಕ್ಕೆ ಹೋಗುತ್ತಿದ್ದಾಗ ಮಾತನಾಡಬೇಕು ಎಂದು ನಿಲ್ಲಿಸಿ, ನಟ್ಟ ನಡು ರಸ್ತೆಯಲ್ಲೇ ಚಾಕುವಿನಿಂದ ಚುಚ್ಚಿ-ಚುಚ್ಚಿ ಕೊಂದಿದ್ದಾನೆ.
ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ ಚಾಂದ್ ಸುಲ್ತಾನ ಮನೆಗೆ ಒಬ್ಬಳೇ ಮಗಳು. ಹೇಗೋ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಕುಟುಂಬದವರಿಗೆ ಕೊಲೆಯ ವಿಚಾರ ತಿಳಿದು, ಕೊಲೆಗಾರನನ್ನು ಹುಡುಕಾಡುವಷ್ಟರಲ್ಲೇ ಸಾದತ್ ವಿಷ ಸೇವಿಸಿ ಸಿಟಿ ಸೆಂಟ್ರಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ. ಸದ್ಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.