ಕಡಬ : ಉಪ್ಪಿನಂಗಡಿ ಠಾಣೆಯ ಪೊಲೀಸರೊಬ್ಬರು ಕುಡಿದ ಮತ್ತಿನಲ್ಲಿ ಪಾನ್ ಅಂಗಡಿ ಮಾಲಕನಿಗೆ ಲಾಠಿಯಲ್ಲಿ ಯದ್ವಾತದ್ವಾ ಹೊಡೆದು ಅಂಗಡಿ ಚಲ್ಲಾಪಿಲ್ಲಿ ಮಾಡಿ ಕರ್ತವ್ಯದ ನಡುವೆ ಕಾರಿನಲ್ಲಿ ಪರಾರಿಯಾದ ಘಟನೆ ನಡೆದಿದೆ.
ಏಕಾಹಭಜನ ಮಹೋತ್ಸವಕ್ಕೆ ಹೆಚ್ಚುವರಿಯಾಗಿ ಉಪ್ಪಿನಂಗಡಿ ಠಾಣೆಯ ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ನಡುರಾತ್ರಿ ಕಾಲೇಜು ರಸ್ತೆಯಲ್ಲಿರುವ ಪಾನ್ ಅಂಗಡಿಯತ್ತ ನಡೆದುಕೊಂಡು ಬಂದ ಶಿಶಿಲದ ಮೋಹನ್ ಮತ್ತು ಸೀತರಾಮ ಎಂಬ ಇಬ್ಬರು ಸಿಬ್ಬಂದಿಗಳು ಬಿಟ್ಟಿ ಬೀಡ ಜಗಿದು ಹಣ ನೀಡದೆ ಹೋಗಲು ಮುಂದಾಗಿದ್ದರು . ಹೀಗಾಗಿ ಪಾನ್ ಅಂಗಡಿಯಾತ ೨೦ ರೂ ಹಣ ಕೊಡುವಂತೆ ವಿನಂತಿಸಿದ್ದ. ಇದರಿಂದ ಕುಪಿತಗೊಂಡ ಪೊಲೀಸ್ ಸಿಬ್ಬಂದಿ ತನ್ನ ಪೊಲೀಸರ ಬಳಿಯೇ ಹಣ ಕೇಳುತ್ತಿಯಾ ಎಂದು ಏರುಧ್ವನಿಯಲ್ಲಿ ಮಾತನಾಡಿ ಕೈಯಲ್ಲಿದ್ದ ಲಾಠಿಯಿಂದ ಯದ್ವತದ್ವಾ ಹೊಡೆದು ಪಾನ್ ಸ್ಟಾಲನ್ನು ಧ್ವಂಸ ಮಾಡಿದ್ದಾರೆ ಎನ್ನಲಾಗಿದೆ.
ಪೊಲೀಸ್ ಸಿಬ್ಬಂದಿ ದುರ್ವರ್ತನೆ ತೋರಿದ ಬಳಿಕ ತಮ್ಮ ಕಾರಿನಲ್ಲಿ ಹೋಗಿ ಕೂಳಿತ್ತಿದ್ದು ಇದನ್ನು ಗಮನಿಸಿದ ಸಾರ್ವಜನಿಕರು ಕಾರನ್ನು ಸುತ್ತುವರಿದು ತರಾಟೆಗೆ ತೆಗೆದುಕೊಂಡಿದ್ದಾರೆ. ಮೋಹನ್ ಎಂಬ ಪೊಲೀಸ್ ಸಿಬ್ಬಂದಿ ಎಸ್ಕೇಪ್ ಆಗಿದ್ದು ಸೀತರಾಮ ಎಂಬವರ ಕಾರಿನ ಸುತ್ತ ಜನ ಜಮಾಯಿಸಿದ್ದಾರೆ. ಇವರೂ ಪಾನಮತ್ತರಾಗಿ ಇರುವುದನ್ನು ಗಮನಿಸಿದ ಸಾರ್ವಜನಿಕರು ಪುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಲ್ಲದೆ ಸ್ಥಳದಲ್ಲಿದ್ದ ಹಿಂದೂ ಸಂಘಟನೆಯ ಕಾರ್ಯಕರ್ತರು ಅಮಾಯಕನ ಮೇಲೆ ಲಾಠಿಏಟು ನೀಡಿದನ್ನು ಪ್ರಶ್ನಿಸಿದ್ದಾರೆ.
ಪೊಲೀಸ್ ಸಿಬ್ಬಂದಿ ಹೊಡೆದ ಏಟಿಗೆ ಅಸ್ಪಸ್ಥಗೊಂಡ ರೀತಿಯಾಗಿದ್ದು ಕೂಡಲೇ ಕಡಬ ಸಮುದಾಯ ಆಸ್ಪತ್ರೆಗೆ ಬಂದು ದಾಖಲಾಗಿದ್ದಾರೆ. ಮಾಹಿತಿ ತಿ ಳಿದ ಎಸ್.ಐ ರುಕ್ಮ ನಾಯ್ಕ್ ಹಾಗೂ ಸಿಬ್ಬಂದಿಗಳು ಆಸ್ಪತ್ರೆಯತ್ತ ಧಾವಿಸಿದ್ದಾರೆ. ಈ ವೇಳೆ ಸಂಘಟನೆಯ ಮುಖಂಡರೊಂದಿಗೆ ಗಂಭೀರ ಮಾತುಕತೆ ನಡೆಸಿದ್ದಾರೆ. ಈ ವೇಳೆ ರಾಜಿಯಲ್ಲಿ ಪ್ರಕರಣ ಮುಗಿಸುವ ತೀರ್ಮಾನಕ್ಕೆ ಬಂದಿದ್ದು ಬೀಡ ಸ್ಟಾಲ್ ನಾಶ ಪಡಿಸಿದಕ್ಕೆ ಸುಮಾರು ೫ ಸಾವಿರ ರೂ ಮೊತ್ತ ಹಾಗೂ ಕ್ಷಮೆಯಾಚಿಸುವುದಾಗಿ ತೀರ್ಮಾಣಕ್ಕೆ ಬರಲಾಯಿತು ಎಂದು ತಿಳಿದು ಬಂದಿದೆ.