ಕಲ್ಲಡ್ಕ: ದಿನಾಂಕ 3.12.2021 ರಂದು ಶ್ರೀರಾಮ ವಿದ್ಯಾಕೇಂದ್ರದ ಕೃಷಿ ಭೂಮಿಯಲ್ಲಿ ತಾವೇ ಬೆಳೆದ ಭತ್ತದ ತೆನೆ ಬಿಡಿಸುವ ಕಾರ್ಯವನ್ನು ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ಕೃಷಿ ಸಂಘದ ವಿದ್ಯಾರ್ಥಿಗಳು ಮಾಡಿದರು.
ಶ್ರೀರಾಮ ಶಾಲಾಭಿವೃದ್ಧಿ ಸಮಿತಿಯ ಸದಸ್ಯರಾದ ಜಯರಾಂ ಸುಧೆಕ್ಕಾರ್ ರವರು ಈ ಕೃಷಿ ಕಾರ್ಯಕ್ಕೆ ಚಾಲನೆಯನ್ನು ನೀಡಿ, “ವಿದ್ಯಾರ್ಥಿಗಳು ಇಂತಹ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ.
ಮಾನವ ಎಷ್ಟೇ ಅಭಿವೃದ್ಧಿ ಕಡೆಗೆ ಮುಂದುವರೆದರೂ ಕೃಷಿ ಚಟುವಟಿಕೆಯ ಹೊರತಾಗಿ ಅವನ ಜೀವನವನ್ನು ಊಹಿಸಲು ಅಸಾಧ್ಯ. ಇಂತಹ ಕೃಷಿ ಚಟುವಟಿಕೆ ಅರಿವು ಬಾಲ್ಯದಿಂದಲೇ ನೀಡಿದಾಗ ಮಕ್ಕಳು ತಮ್ಮ ಮನೆಯಲ್ಲೂ ಕೃಷಿ ಭೂಮಿಯನ್ನು ಉಳಿಸಿಕೊಳ್ಳುವಲ್ಲಿ ಮತ್ತು ಆಸಕ್ತಿಯನ್ನು ಬೆಳೆಸಿಕೊಳ್ಳಲು ಇದು ಸಹಕಾರಿ ” ಎಂದು ಹೇಳಿದರು.
ವಿದ್ಯಾರ್ಥಿಗಳು ತೆನೆ ಬಿಡಿಸಿ, ಬೈಹುಲ್ಲನ್ನು ವಿದ್ಯಾಕೇಂದ್ರದ ಗೋಶಾಲೆಗೆ ಸಮರ್ಪಿಸಿದ್ದು ವಿಶೇಷವಾಗಿತ್ತು. ಕೃಷಿ ಸಂಘದ ನಿರ್ದೇಶಕರಾದ ಸುಮಂತ್ ಆಳ್ವ ಮತ್ತು ರಾಜೇಶ್ವರಿ , ಅಧ್ಯಾಪಕರಾದ ನಿವೇದಿತಾ ಹಾಗೂ ಮುಖ್ಯೋಪಾಧ್ಯಾಯರಾದ ರವಿರಾಜ್ ಕಣಂತೂರು ಉಪಸ್ಥಿತರಿದ್ದರು. ಒಟ್ಟು 190 ವಿದ್ಯಾರ್ಥಿಗಳು ಭಾಗವಹಿಸಿದರು.