ಕಾಪು: ಕಾಪು ಪ್ರಖಂಡ ಭಜರಂಗದಳ ಸಂಚಾಲಕ ಸುಧೀರ್ ಸೋನು ಅಲಿಯಾಸ್ ನಾಮ ಸುಧೀರ್ ರವರಿಗೆ ಜೀವ ಬೆದರಿಕೆ ಒಡ್ಡಿದ ಆರೋಪಿಗಳಿಗೆ ಉಡುಪಿ ನ್ಯಾಯಾಲಯ ಮಂಗಳವಾರ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ.

ಕಾಪು ಚಂದ್ರನಗರದ ನಿವಾಸಿಗಳಾದ ಅಶ್ರಫ್ ಯಾನೆ ಆಸಿ ಮತ್ತು ಸೋಯೆಬ್ ಮತ್ತವರ ತಂಡ ತನ್ನ ಮನೆಗೆ ನುಗ್ಗಿ ಜೀವ ಬೆದರಿಕೆ ಒಡ್ಡಿದ್ದರು ಎಂದು ಸುಧೀರ್ ಸೋನು ಶಿರ್ವ ಠಾಣೆಗೆ ದೂರು ನೀಡಿದ್ದರು. ಅಲ್ಲದೆ ಅಶ್ರಫ್ ಈ ಹಿಂದೆ ಹಲವಾರು ಪ್ರಕಣಗಳಲ್ಲಿ ಭಾಗಿಯಾಗಿರುವುದರಿಂದ ಆತನನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕೆಂದು ಪೋಲಿಸರಿಗೆ ಮನವಿ ಮಾಡಿದ್ದರು.

ಆರೋಪಿಗಳಾದ ಅಶ್ರಫ್ ಮತ್ತು ಸೋಯೆಬ್ನನ್ನು ಬಂಧಿಸಿದ ಶಿರ್ವ ಪೋಲಿಸರು ಸೋಮವಾರ ಸಂಜೆ ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ದೂರುದಾರ ಸುಧೀರ್ ಪೂಜಾರಿ ವಿರುದ್ದ ಕೂಡಾ ಹಲವಾರು ಪ್ರಕರಣ ಬಾಕಿ ಇದೆ. ಆತ ಬಡ್ಡಿ ವ್ಯವಹಾರ ನಡೆಸುತ್ತಿದ್ದು, ಆರೋಪಿಗಳು ಮತ್ತು ದೂರುದಾರರ ನಡುವೆ ಹಲವು ವರ್ಷಗಳಿಂದ ಹಣದ ಲೇವಾದೇವಿ ನಡೆಯುತ್ತಿದೆ.

ಇದೀಗ ಪರಿಸ್ಥಿಯ ಲಾಭ ಪಡೆದು ರಾಜಕೀಯವಾಗಿ ಹೆಸರು ಗಳಿಸುವ ಪ್ರಯತ್ನವನ್ನು ದೂರುದಾರ ಮಾಡಿರುತ್ತಾರೆ. ಅದಕ್ಕೆ ಪೋಲಿಸರು ಕೂಡ ಸಹಕರಿಸುತ್ತಿದ್ದಾರೆ ಎಂದು ಆರೋಪಿ ಪರ ವಕೀಲರು ವಾದ ಮಂಡಿಸಿದ್ದರು. ಇದನ್ನು ಮಾನ್ಯ ಮಾಡಿದ ನ್ಯಾಯಾಲಯ ಆರೊಪಿಗಳಿಗೆ ಶರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಆರೋಪಿ ಪರ ವಕೀಲ ಅಸದುಲ್ಲಾ ಕಟಪಾಡಿ ವಾದಿಸಿದ್ದರು.









