ಕಾರವಾರ: ಬರೋಬ್ಬರಿ ನಾಲ್ಕು ದಶಕಗಳ ಹಿಂದೆ ಸಿಂಗಾಪುರದಿಂದ ಕಾರವಾರ ಬಂದರಿಗೆ ಆಗಮಿಸುವ ವೇಳೆ ಕಡಲಬ್ಬರಕ್ಕೆ ಸಿಲುಕಿ ಮುಳುಗಿದ್ದ ಸರಕು ಸಾಗಾಣಿಕೆ ಹಡಗಿನ ಅವಶೇಷ ಪತ್ತೆಯಾಗಿದೆ.

ಸಿಂಗಾಪುರದ ಚೆರಿಮಾಜು ಹೆಸರಿನ ಸರಕು ಸಾಗಾಣಿಕೆ ಹಡಗು 1981 ರಲ್ಲಿ ಸಿಂಗಾಪುರದಿಂದ ಕಾರವಾರ ಬಂದರಿಗೆ ಸುಮಾರು 14,418 ಟನ್ ಡಾಂಬರ್ ಹೊತ್ತು ತರುವಾಗ ಕಡಲಬ್ಬರಕ್ಕೆ ಸಿಲುಕಿ ಮುಳುಗಡೆಯಾಗಿತ್ತು. ಹಡಗಿನಲ್ಲಿದ್ದ 30 ನಾವಿಕರನ್ನು ರಕ್ಷಿಸಲಾಗಿತ್ತು.

ಕಾರವಾರದ ಸಮುದ್ರದಲ್ಲಿ ಹುದುಗಿದ್ದ ಸಿಂಗಾಪುರದ ಹಡಗನ್ನು ಮೇಲೆತ್ತಲು ಪ್ರಯತ್ನ ಮಾಡಲಾದರೂ ಕಾರ್ಯಾಚರಣೆ ಸಾಧ್ಯವಾಗಿರಲಿಲ್ಲ. ಕಂಪನಿ ಸಮುದ್ರದಾಳದಲ್ಲಿ ಹಡಗಿನ ಅವಶೇಷಗಳನ್ನು ಕತ್ತರಿಸಿ ಹಡಗು ತೆಗೆದುಕೊಂಡು ಹೋಗುವ ಪ್ರಯತ್ನ ಮಾಡಿತ್ತು. ಆಳ, ಹೆಚ್ಚು ಮರಳು ತುಂಬಿದ್ದರಿಂದ ಅಲ್ಪ ಭಾಗವನ್ನಷ್ಟೇ ಮೇಲೆತ್ತಲಾಗಿತ್ತು.

ಆದರೆ ಈಗ ಅಲೆಯ ರಭಸಕ್ಕೆ ಸಿಕ್ಕ ಹಡಗಿನ ಅವಶೇಷ ತನ್ನಿಂದತಾನೆ ಮೇಲೆ ಬಂದಿದೆ. ಒಟ್ಟಾರೆ ಕಾರವಾರ ಜನತೆ ಪಾಲಿಗೆ ಈ ಅಚ್ಚರಿ ಕೌತುಕಕ್ಕೆ ಕಾರಣವಾಯಿತು. ಕೊನೆಗೂ ಇದು 4 ದಶಕಗಳ ಹಿಂದೆ ಹುದುಗಿದ್ದ ಹಡಗಿನ ಅವಶೇಷ ಎನ್ನುವುದು ತಿಳಿಯುವುದರೊಂದಿಗೆ ಹಡಗಿನ ಅಪರೂಪದ ರಹಸ್ಯವೂ ಬಯಲಾಯಿತು.










