ಬೆಂಗಳೂರು: ಕಾರು ಚಾಲಕನನ್ನು ಬೈಕ್ ಸವಾರನೊಬ್ಬ ಒಂದೂವರೆ ಕಿಲೋ ಮೀಟರ್ ದೂರಕ್ಕೆ ಎಳೆದೊಯ್ದ ಅಮಾನವೀಯ ಕೃತ್ಯ ನಗರದ ಮಾಗಡಿ ರಸ್ತೆಯ ಟೋಲ್ ಗೇಟ್ ಬಳಿ ನಡೆದಿದೆ.
ಟೋಲ್ ಗೇಟ್ ಬಳಿ ಟಾಟಾ ಸುಮೋಗೆ ಬೈಕ್ ಸವಾರ ಡಿಕ್ಕಿ ಹೊಡೆದಿದ್ದು, ಇದನ್ನು ಪ್ರಶ್ನಿಸಲು ಹೋದಾಗ ಬೈಕ್ ಏರಿ ಸವಾರ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಕಾರು ಚಾಲಕ ಬೈಕ್ ಹಿಂಭಾಗ ಹಿಡಿದಿದ್ದು, ಬೈಕ್ ಸವಾರ ಆ ವ್ಯಕ್ತಿಯನ್ನು ಒಂದೂವರೆ ಕಿಲೋ ಮೀಟರ್ ದೂರಕ್ಕೆ ಎಳೆದೊಯ್ದಿದ್ದಾನೆ. ಮಾಗಡಿ ರಸ್ತೆ ಟೋಲ್ ಗೇಟ್ ಬಳಿಯಿಂದ ಹೊಸಳ್ಳಿ ಮೆಟ್ರೋ ನಿಲ್ದಾಣದವರೆಗೆ ಎಳೆದೊಯ್ದಿದ್ದಾನೆ. ವಯಸ್ಸಾದ ಚಾಲಕನನ್ನ ಬೈಕ್ನಲ್ಲಿ ಎಳೆದೊಯ್ಯುತ್ತಿರುವುದನ್ನು ಸಾರ್ವಜನಿಕರು ವಿಡಿಯೋ ಮಾಡಿದ್ದಾರೆ.
ವಯಸ್ಸಾದ ಚಾಲಕನನ್ನ ಬೈಕ್ನಲ್ಲಿ ಎಳೆದೊಯ್ತುತ್ತಿರುವುದನ್ನು ನೋಡಿದ ಇತರೆ ವಾಹನ ಸವಾರರು ಬೈಕ್ ಅನ್ನು ಅಡ್ಡಹಾಕಿ ಪ್ರಶ್ನಿಸಿ ಧರ್ಮದೇಟು ನೀಡಿದ್ದಾರೆ. ಮಾಹಿತಿ ತಿಳಿದ ವಿಜಯ ನಗರ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಬೈಕಿನ ಹಿಂದೆ ನೇತುಬಿದ್ದು ಒಂದೂವರೆ ಕಿಮೀ ಎಳೆದೊಯ್ಯಲ್ಪಟ್ಟ ಟಾಟಾಸುಮೋ ಚಾಲಕನಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಬೈಕ್ ಸವಾರನನ್ನು ಬ್ಯಾಟರಾಯನಪುರ ನಿವಾಸಿ ಸುಹೇಲ್ ಅಲಿಯಾಸ್ ಸಾಹಿಲ್ ಸೈಯದ್ ಎಂದು ಗುರುತಿಸಲಾಗಿದ್ದು, ಸೇಲ್ಸ್ಮನ್ ಆಗಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ನಡೆಸಿದ ವಿಚಾರಣೆ ವೇಳೆ ತಿಳಿದುಬಂದಿದೆ.