ತುಮಕೂರು: ನಗರದ 30ನೇ ವಾರ್ಡ್ನ ಗಾರೆನರಸಯ್ಯನ ಕಟ್ಟೆಯಲ್ಲಿ ಶನಿವಾರ ನೂರಾರು ಜನರ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯುತ್ತಿರುವಾಗಲೇ ಶಾಮಿಯಾನ ಕುಸಿದಿದ್ದು, ಕಾರ್ಪೋರೇಟರ್ ವಿಷ್ಣುವರ್ಧನ್ ಸೇರಿ ಐವರು ಗಾಯಗೊಂಡಿದ್ದಾರೆ. ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಪುತ್ರಿ ಶ್ರದ್ಧಾ, ಶಾಸಕ ಜಿ.ಬಿ.ಜ್ಯೋತಿಗಣೇಶ್, ಮೇಯರ್ ಬಿ.ಜಿ.ಕೃಷ್ಣಪ್ಪ ಸೇರಿದಂತೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗಾರೆನರಸಯ್ಯನ ಕಟ್ಟೆ(ಕೆರೆ)ಯನ್ನು ಧರ್ಮಸ್ಥಳ ಗ್ರಾಮೀಣಾಭೀವೃದ್ಧಿ ಸಂಘದಿಂದ ಅಭಿವೃದ್ಧಿ ಪಡಿಸಲಾಗಿತ್ತು. ಈ ಕೆರೆಯನ್ನು ಮಹಾನಗರ ಪಾಲಿಕೆಗೆ ಹಸ್ತಾಂತರಿಸುವ ಹಿನ್ನೆಲೆ ಇಂದು ಕಾರ್ಯಕ್ರಮ ಆಯೋಜಿಸಲಾಗಿತ್ತು.
ವೇದಿಕೆಯಲ್ಲಿ ವೀರೇಂದ್ರ ಹೆಗಡೆ ಅವರ ಪುತ್ರಿ ಶ್ರದ್ಧಾ, ತುಮಕೂರು ನಗರ ಬಿಜೆಪಿ ಶಾಸಕ ಜ್ಯೋತಿಗಣೇಶ್, ಮೇಯರ್ ಕೃಷ್ಣಪ್ಪ, ಸ್ಥಳೀಯ ಕಾರ್ಪೋರೇಟರ್ ವಿಷ್ಣುವರ್ಧನ್ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು. ವೇದಿಕೆ ಮುಂಭಾಗ ನೂರಾರು ಜನ ಆಸೀನರಾಗಿದ್ದರು. ಈ ವೇಳೆ ರಭಸವಾಗಿ ಬೀಸಿದ ಬಿರುಗಾಳಿಗೆ ಶಾಮೀಯಾನ ಕುಸಿದಿದೆ. ಭಯದಿಂದ ಜನ ದಿಕ್ಕಾಪಾಲಾಗಿ ಓಡಿದ್ದಾರೆ.