ಪುತ್ತೂರು: ಕುಂಬ್ರದಲ್ಲಿ ಎಸ್ಡಿಪಿಐ ಕಾರ್ಯಕರ್ತರೊಬ್ಬರಿಗೆ ತಂಡವೊಂದು ಹಲ್ಲೆ ನಡೆಸಿದ ಮತ್ತು ಈ ಸಂದರ್ಭ ಸ್ಥಳದಲ್ಲಿ ಗುಂಪು ಜಮಾಯಿಸಿದ್ದು ಪೊಲೀಸರು ಲಾಠಿ ಬೀಸುವ ಮೂಲಕ ಅವರನ್ನು ಚದುರಿಸಿದ ಘಟನೆ ಅ.22 ರಂದು ರಾತ್ರಿ ನಡೆದಿರುವುದಾಗಿ ವರದಿಯಾಗಿದೆ.
ಪರ್ಪುಂಜ ನಿವಾಸಿ ಸರ್ಫರಾಝ್ ಎಂಬವರು ಹಲ್ಲೆಗೊಳಗಾದವರು. ”ನಾನು ರಾತ್ರಿ ಕುಂಬ್ರದಿಂದ ಸ್ಕೂಟರ್ನಲ್ಲಿ ಮನೆ ಕಡೆ ಹೊರಟಾಗ ಕುಂಬ್ರ ಜಂಕ್ಷನ್ನಲ್ಲಿ, ಎಸ್.ಕೆ.ಎಸ್.ಎಸ್.ಎಫ್ನಲ್ಲಿ ಗುರುತಿಸಿಕೊಂಡಿರುವ ಕೆಲವರು ನನ್ನನ್ನು ನಿಲ್ಲಿಸಿ ಮಾತಿಗೆ ಮಾತು ಬೆಳೆಸಿ ಹಲ್ಲೆ ನಡೆಸಿದ್ದಾರೆ” ಎಂದು ಅವರು ಆರೋಪಿಸಿದ್ದಾರೆ. ಹಲ್ಲೆಯಿಂದಾಗಿ ಸರ್ಫರಾಝ್ ಅವರ ಹಲ್ಲು ತುಂಡಾಗಿದ್ದು, ಎಡಕಾಲಿನ ಹೆಬ್ಬೆರಳಿಗೆ ಗಾಯವಾಗಿದೆ. ಅವರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಗುಂಪು ಚದುರಿಸಿದ ಪೊಲೀಸರು:
ಘಟನೆಯಿಂದಾಗಿ ಕುಂಬ್ರ ಜಂಕ್ಷನ್ನಲ್ಲಿ ಕೆಲವರು ಗುಂಪು ಸೇರಿ ತುಸು ಉದ್ವಿಗ್ನ ವಾತಾವರಣ ನಿರ್ಮಾಣಗೊಂಡಿತ್ತು. ಈ ವೇಳೆ ಮಾಹಿತಿ ಪಡೆದ ಸಂಪ್ಯ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಅಲ್ಲಿ ಗುಂಪು ಸೇರಿದ್ದ ಜನರನ್ನು ಲಾಠಿ ಬೀಸಿ ಚದುರಿಸಿದ್ದಾರೆ ಎಂದು ತಿಳಿದು ಬಂದಿದೆ.