ಮಂಗಳೂರು: ಕುಕ್ಕರ್ ಬ್ಲಾಸ್ಟ್ ಪ್ರಕರಣದಲ್ಲಿ ಗಾಯಗೊಂಡಿದ್ದ ಶಂಕಿತ ಉಗ್ರ ಮೊಹಮ್ಮದ್ ತಾರೀಕ್ ನನ್ನು ಎನ್ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಇಂದು ಬೆಳಗ್ಗೆ ವಶಕ್ಕೆ ಪಡೆದು ಕಂಕನಾಡಿ ಆಸ್ಪತ್ರೆಯಿಂದಲೇ ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದಾರೆ.
ಘಟನೆಯಲ್ಲಿ 40 ಶೇಕಡಾದಷ್ಟು ಸುಟ್ಟ ಗಾಯಗಳಾಗಿದ್ದ ಶಾರೀಕ್ ನನ್ನು ಮಂಗಳೂರಿನ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ವಾರದ ಹಿಂದೆ 75 ಶೇಕಡಾ ಚೇತರಿಕೆ ಆಗಿದ್ದಾನೆ ಎನ್ನುವ ಮಾಹಿತಿಗಳಿದ್ದವು. ಹೀಗಾಗಿ ಪ್ರಕರಣದ ಬಗ್ಗೆ ಎನ್ಐಎ ಅಧಿಕಾರಿಗಳು ಶಾರೀಕ್ ನನ್ನು ವಿಚಾರಣೆ ಆರಂಭಿಸಿದ್ದರು. ಆದರೆ ಅಧಿಕಾರಿಗಳ ಪ್ರಶ್ನೆಗೆ ಸರಿಯಾದ ಉತ್ತರ ನೀಡದ ಅಸಹಕಾರ ತೋರುತ್ತಿದ್ದ ಎನ್ನಲಾಗಿತ್ತು. ತನಗೇನೂ ತಿಳಿದಿಲ್ಲ ಎಂದೇ ಅಧಿಕಾರಿಗಳಿಗೆ ಮಾಹಿತಿ ನೀಡುತ್ತಿದ್ದ.
ಈ ಹಿನ್ನೆಲೆಯಲ್ಲಿ ಇಂದು ಬೆಳ್ಳಂಬೆಳಗ್ಗೆ ಶಾರೀಕ್ ನನ್ನು ವಶಕ್ಕೆ ಪಡೆದು ಅಧಿಕಾರಿಗಳು ನೇರವಾಗಿ ಬೆಂಗಳೂರು ಎನ್ಐಎ ಕಚೇರಿಗೆ ಒಯ್ದಿದ್ದಾರೆ. ಚಿಕಿತ್ಸೆ ಅಗತ್ಯ ಬಿದ್ದಲ್ಲಿ ಬೆಂಗಳೂರಿನಲ್ಲಿಯೇ ನೀಡುವ ಸಾಧ್ಯತೆಯಿದೆ.
ನ19ರಂದು ಕಂಕನಾಡಿಯ ನಾಗುರಿಯಲ್ಲಿ ಆಟೋ ರಿಕ್ಷಾದಲ್ಲಿ ತೆರಳುತ್ತಿದ್ದಾಗಲೇ ಸ್ಫೋಟ ಘಟನೆ ಆಗಿತ್ತು. ಪರಿಶೀಲನೆ ವೇಳೆ, ಪ್ರೆಶರ್ ಕುಕ್ಕರ್ ಸ್ಫೋಟವಾಗಿದ್ದು ಕಂಡುಬಂದಿತ್ತು. ಘಟನೆಯಲ್ಲಿ ಕುಕ್ಕರ್ ಹಿಡಿದುಕೊಂಡಿದ್ದ ಶಾರೀಕ್ ಗಂಭೀರ ಗಾಯಗೊಂಡಿದ್ದ ಮೊದಲಿಗೆ, ಅದು ಶಾರೀಕ್ ಎನ್ನುವುದು ತಿಳಿದುಬಂದಿರಲಿಲ್ಲ. ಯಾರೋ ವ್ಯಕ್ತಿ ಗಾಯಗೊಂಡಿದ್ದಾನೆ ಎನ್ನಲಾಗಿತ್ತು. ವ್ಯಕ್ತಿಯ ಜೊತೆಗಿದ್ದ ಐಡಿ ಕಾರ್ಡ್ ನಲ್ಲಿ ಪ್ರೇಮರಾಜ್ ಹುಟಗಿ ಎನ್ನುವ ಹೆಸರಿನ ಆಧಾರ್ ಕಾರ್ಡ್ ಸಿಕ್ಕಿತ್ತು. ಹೀಗಾಗಿ ಬಹಳಷ್ಟು ಅನುಮಾನಗಳು ಉಂಟಾಗಿದ್ದವು. ಎರಡು ದಿನಗಳ ಬಳಿಕ, ಗಾಯಗೊಂಡ ವ್ಯಕ್ತಿ ಮೊಹಮ್ಮದ್ ಶಾರೀಕ್, ಗೋಡೆ ಬರಹ ಪ್ರಕರಣದ ಆರೋಪಿ ಎನ್ನುವುದನ್ನು ಪೊಲೀಸರು ಪತ್ತೆ ಮಾಡಿದ್ದರು. ಆನಂತರ, ಬಿಗು ಭದ್ರತೆಯಲ್ಲಿ ಶಾರೀಕ್ ಗೆ ಚಿಕಿತ್ಸೆ ನೀಡಲಾಗಿತ್ತು.