ಕೇರಳದ ಕೋಝಿಕ್ಕೋಡ್ ಜಿಲ್ಲೆಯಲ್ಲಿ ಅಲಪ್ಪುಳ-ಕಣ್ಣೂರು ಎಕ್ಸಿಕ್ಯೂಟಿವ್ ಎಕ್ಸ್ಪ್ರೆಸ್ ರೈಲಿಗೆ ಬೆಂಕಿ ಹಚ್ಚಿ ಒಂದು ಶಿಶು ಸೇರಿದಂತೆ ಮೂವರು ಪ್ರಾಣ ಕಳೆದುಕೊಂಡ ಘಟನೆಯ ಪ್ರಮುಖ ಆರೋಪಿ ಶಾರುಖ್ ಸೈಫಿಯನ್ನು ಮಹಾರಾಷ್ಟ್ರದ ರತ್ನಗಿರಿಯಲ್ಲಿ ಬಂಧಿಸಲಾಗಿದೆ.
ಕೇಂದ್ರ ಗುಪ್ತಚರ ಮತ್ತು ಮಹಾರಾಷ್ಟ್ರ ಎಟಿಎಸ್ ಜಂಟಿ ತಂಡ ಸೈಫಿಯನ್ನು ಬಂಧಿಸಿದ್ದಾರೆ.
ಘಟನೆಯ ಬಳಿಕ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತನಿಖೆಗಾಗಿ ಎಸ್ಐಟಿ ರಚಿಸಲು ಆದೇಶ ನೀಡಿದ್ದರು. ಘಟನೆಯ ಬಳಿಕ ಶಾರುಖ್ ಸೈಫಿ ತಲೆ ಮರೆಸಿಕೊಂಡಿದ್ದನು. ರೈಲಿನಿಂದ ಇಳಿಯುವಾಗ ಬಿದ್ದು ಗಾಯಗೊಂಡಿರುವ ಶಾರುಖ್ ಸೈಫಿಗೆ ರತ್ನಗಿರಿ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಘಟನೆಯ ವಿವರ : ಅಪರಿಚಿತ ವ್ಯಕ್ತಿಯೊಬ್ಬ ಪೆಟ್ರೋಲ್ ತರಹದ ದ್ರವ ತುಂಬಿದ್ದ ಎರಡು ಬಾಟಲಿಗಳೊಂದಿಗೆ ಡಿ1 ಕೋಚ್ಗೆ ನುಗ್ಗಿದ್ದು, ನಂತರ ಪ್ರಯಾಣಿಕರೊಂದಿಗೆ ಜಗಳವಾಡಿದ್ದ ಇದಾದ ಬಳಿಕ ಪ್ರಯಾಣಿಕರು ಮತ್ತು ರೈಲಿನ ಬೋಗಿಗೆ ಪೆಟ್ರೋಲ್ ಅನ್ನು ಚೆಲ್ಲಿ ಬೆಂಕಿ ಹಚ್ಚಿ ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ರೈಲಿನಲ್ಲಿದ್ದ ಕೆಲವು ಪ್ರಯಾಣಿಕರು ತಿಳಿಸಿದ್ದಾರೆ. ಬೆಂಕಿ ವ್ಯಾಪಿಸುತ್ತಿದ್ದಂತೆ ಕೆಲ ಪ್ರಯಾಣಿಕರು ರೈಲಿನ ಚೈನ್ ಎಳೆದಿದ್ದು ರೈಲು ನಿಂತಿದ್ದರಿಂದ ಆರೋಪಿ ಪರಾರಿಯಾಗಿದ್ದನು ಆತನಿಗೂ ಸುಟ್ಟ ಗಾಯಗಳಾಗಿವೆ.
ಇನ್ನೂ ಬೆಂಕಿ ಹೊತ್ತಿಕೊಳ್ಳುತ್ತಲೇ ರೈಲಿನಿಂದ ಹಾರಿ ಮೂವರು ಮೃತಪಟ್ಟಿದ್ದಾರೆ. ಸೋಮವಾರ ಮುಂಜಾನೆ ಹಳಿಗಳ ಮೇಲೆ ಹುಡುಕಾಟ ನಡೆಸಿದಾಗ ಅವರ ಮೃತದೇಹಗಳು ಪತ್ತೆಯಾಗಿವೆ. ಈ ಬಗ್ಗೆ ಕಾರ್ಯಾಚರಣೆಗಿಳಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು ವಿಚಾರಣೆ ನಡೆಯುತ್ತಿದೆ.