ಬೆಂಗಳೂರು: ಕೊವಿಡ್ ನಿರ್ವಹಣೆ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಎಲ್ಲ ಮುಖ್ಯಮಂತ್ರಿಗಳ ಜೊತೆಗೆ ಗುರುವಾರ ಪರಾಮರ್ಶನ ಸಭೆ ನಡೆಸಿ ವಿವಿಧ ರಾಜ್ಯಗಳು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದರು. ಕೊರೊನಾ ನಿರ್ವಹಣೆಗೆ ಕರ್ನಾಟಕ ತೆಗೆದುಕೊಂಡಿರುವ 5-ಟಿ ಸೂತ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು. ಟೆಸ್ಟಿಂಗ್, ಟ್ರ್ಯಾಕಿಂಗ್, ಟ್ರೇಸಿಂಗ್, ಟ್ರಯಾಜಿಂಗ್, ಟೆಕ್ನಾಲಜಿ ಎನ್ನುವ 5-ಟಿ ಬಳಕೆಯ ಸೂತ್ರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿವರಿಸಿದರು. ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪರೀಕ್ಷೆ ನಡೆಸುತ್ತಿರುವ ಬಗ್ಗೆ ಹಾಗೂ ಲಸಿಕೆ ಹಾಕಿಸಿಕೊಂಡವರ ಪ್ರಮಾಣದ ಬಗ್ಗೆಯೂ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು. ಲಸಿಕಾಕರಣ ಮತ್ತು ಟೆಸ್ಟಿಂಗ್ ಸರಾಸರಿಯು ದೇಶದ ಸರಾಸರಿಗಿಂತ ಹೆಚ್ಚಾಗಿರುವ ಬಗ್ಗೆ ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು. ಆರೋಗ್ಯ ಮೂಲಸೌಕರ್ಯ ಅಭಿವೃದ್ಧಿಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಪ್ರಧಾನಿಗೆ ಮುಖ್ಯಮಂತ್ರಿ ಮಾಹಿತಿ ನೀಡಿದರು. ಆಕ್ಸಿಜನೇಟೆಡ್ ಬೆಡ್, ಆಕ್ಸಿಜನ್ ಘಟಕ ಹೆಚ್ಚಿಸಲು ಕೇಂದ್ರ ಸರ್ಕಾರ ನೆರವು ನೀಡಬೇಕು ಎಂದು ಬೊಮ್ಮಾಯಿ ಕೋರಿದರು.
ಹೋಂ ಐಸೊಲೇಷನ್ ಮೇಲ್ವಿಚಾರಣೆಗೆ ಸಮರ್ಪಕ ತಂತ್ರಜ್ಞಾನ ಬಳಕೆ ಮಾಡುತ್ತಿರುವ ಬಗ್ಗೆಯೂ ಮೋದಿ ಶ್ಲಾಘಿಸಿದರು. ಕೊರೊನಾ ಮೂರನೇ ಅಲೆ ಫೆಬ್ರುವರಿಯಲ್ಲಿ ತೀವ್ರಗೊಳ್ಳುವ ನಿರೀಕ್ಷೆಯಿದೆ. ಈ ಕುರಿತು ಮುನ್ನೆಚ್ಚರಿಕೆ ವಹಿಸಬೇಕು ಮತ್ತು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕೆಂದು ಪ್ರಧಾನಿ ಸೂಚಿಸಿದರು. ಕೇಂದ್ರ ಸರ್ಕಾರವು ಘೋಷಿಸಿರುವ ₹ 23,000 ಕೋಟಿ ಪ್ಯಾಕೇಜ್ ಬಳಸಿಕೊಂಡು ಆರೋಗ್ಯ ಮೂಲಸೌಕರ್ಯ ಹೆಚ್ಚಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಬೊಮ್ಮಾಯಿಗೆ ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದರು.