ನಿನ್ನೆ ಪ್ರಧಾನಮಂತ್ರಿ ನರೇಂದ್ರ ಮೋದಿ ಕಿಸಾನ್ ಸಮ್ಮಾನ್ ನಿಧಿಯ 10ನೇ ಕಂತಿನ ಹಣ ಬಿಡುಗಡೆ ಮಾಡಿದರು. ಒಟ್ಟು 10 ಕೋಟಿ ಫಲಾನುಭವಿ ರೈತರ ಖಾತೆಗೆ 20 ಸಾವಿರ ಕೋಟಿ ರೂ.ಬಿಡುಗಡೆ ಮಾಡಿ ಮಾತನಾಡಿದ ಅವರು, 2021ರಲ್ಲಿ ಕೊರೊನಾ ವಿರುದ್ಧ ನಾವು ಸೆಣೆಸಾಡಿದ್ದೇವೆ. ನಾವು ಇನ್ನು ಮುಂದೆ ಹೊಸ ಸಂಕಲ್ಪದತ್ತ ಹೆಜ್ಜೆ ಹಾಕಬೇಕು ಎಂದು ಹೇಳಿದರು. ಇದುವರೆಗೆ 145 ಕೋಟಿಗೂ ಅಧಿಕ ಡೋಸ್ ಲಸಿಕೆ ನೀಡಲಾಗಿದೆ. ಭಾರತದಲ್ಲಿ ಇದು ಸಾಧಿತವಾಗುತ್ತದೆ ಎಂದು ಯಾರೂ ಅಂದುಕೊಂಡಿರಲಿಲ್ಲ. ಆದರೆ ಸಂಘಟಿತ ಶಕ್ತಿಯಿಂದ ಈ ಗೆಲುವು ಸಿಕ್ಕಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು.
ಕೊರೊನಾ ಕಾಲದಲ್ಲಿ ಆರೋಗ್ಯ ಕ್ಷೇತ್ರದ ಮೂಲಸೌಕರ್ಯ ವೃದ್ಧಿಯಾಗಿದೆ. ಅನೇಕ ಹೊಸ ಮೆಡಿಕಲ್ ಕಾಲೇಜುಗಳು ನಿರ್ಮಾಣಗೊಂಡಿವೆ. ಆಯುಷ್ಮಾನ್ ಭಾರತ್ ಡಿಜಿಟಲ್ ಹೆಲ್ತ್ ಮಿಷನ್ನಿಂದ ಅಪಾರ ಅನುಕೂಲವಾಗಿದೆ. ಭಾರತಕ್ಕೆ ವಿಶ್ವ ದಾಖಲೆಮಟ್ಟದಲ್ಲಿ ವಿದೇಶಿ ಹೂಡಿಕೆ ಹರಿದುಬಂದಿದೆ. ಡಿಜಿಟಲ್ ಪಾವತಿ ಮೂಲಕ ಹಣ ವರ್ಗಾವಣೆ ಹೆಚ್ಚಾಗಿದೆ ಎಂದು ಪ್ರಧಾನಿ ಹೇಳಿದರು. ಇದೇ ವೇಳೆ, ಪದ್ಮ ಪ್ರಶಸ್ತ್ರಿ ಪುರಸ್ಕೃತರನ್ನು ನೆನಪಿಸಿಕೊಂಡ ಅವರು, ಆ ಸಾಧಕರ ಮುಖ ನೋಡಿದರೇ ಆನಂದವಾಗುತ್ತದೆ ಎಂದರು.
ಹಾಗೇ, ರೈತರು ವಿದ್ಯುತ್ ಉತ್ಪಾದಕರಾಗಲು ನೆರವು ನೀಡುವುದಾಗಿ ತಿಳಿಸಿದ ಪ್ರಧಾನಿ ಮೋದಿ, ಬೀದಿ ದೀಪಗಳನ್ನು ಎಲ್ಇಡಿ ಲೈಟ್ ಆಗಿ ಬದಲಾವಣೆ ಮಾಡುವುದಾಗಿ ಹೇಳಿದರು. 2021ರಲ್ಲಿ ಭಾರತ ಸಾಧಿಸಿದ ಸುಧಾರಣೆಗಳ ಚರ್ಚೆಯಾಗಬೇಕು. ಪಿಎಂ ಗತಿಶಕ್ತಿ ಮಾಸ್ಟರ್ ಪ್ಲ್ಯಾನ್ ಮೂಲಕ ಮೂಲಸೌಕರ್ಯ ಯೋಜನೆಗೆ ವೇಗ ನೀಡಲಾಗಿದೆ. ಮಧ್ಯವರ್ತಿ, ಕಮಿಷನ್ ಇಲ್ಲದೆ ನೇರವಾಗಿ ರೈತರ ಖಾತೆಗೆ ಹಣ ವರ್ಗಾವಣೆ ಮಾಡುವುದರಿಂದ ಸಣ್ಣ ಸಣ್ಣ ರೈತರಿಗೆ ಲಾಭವಾಗಲಿದೆ. ಇನ್ನು ಈ ಹಣವನ್ನು ರೈತರು ಬಿತ್ತನೆ ಬೀಜ ಖರೀದಿಗೆ ಬಳಕೆ ಮಾಡಬಹುದು. ರೈತ ಉತ್ಪಾದಕ ಸಂಘಗಳು ದೊಡ್ಡ ಮಟ್ಟದಲ್ಲಿ ವ್ಯಾಪಾರ ಮಾಡಲು ಅವಕಾಶ ಮಾಡಿಕೊಡಲಾಗುತ್ತಿದೆ. ಅಷ್ಟೇ ಅಲ್ಲ, ಸಂಶೋಧನೆ, ಅನ್ವೇಷಣೆಗಳಿಗೂ ಅವಕಾಶ ನೀಡಲಾಗಿದೆ ಎಂದು ಹೇಳಿದರು.