ರಾಜ್ಯದಲ್ಲಿ ಕೋಮು ಗಲಭೆ ಆಗುತ್ತಿರುವುದು ತಿಳಿದೇ ಇದೆ. ಹಿಂದೂ ಮುಸ್ಲಿಂ ಜಗಳದಲ್ಲಿ ರಾಜಕೀಯ ಮಂದಿ ತಮ್ಮ ಬೇಳೆ ಬೇಯಿಸುತ್ತಿರುವುದು ಕೂಡ ತಿಳಿದಿದೆ. ಇಲ್ಲೊಂದು ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಕೋಮು ಸೌಹಾರ್ದಕ್ಕೆ ಸಾಕ್ಷಿಯಾಗಿದ್ದಾರೆ.
ಮೈಸೂರು ನಗರದಲ್ಲಿ ಶುಕ್ರವಾರ (ಮೇ27 ರಂದು) ಎಐಡಿಎಸ್ಓ ಜಿಲ್ಲಾ ಉಪಾಧ್ಯಕ್ಷೆ ಆಸಿಯಾ ಬೇಗಂ ಮತ್ತು ಎಐಡಿವೈಓ ಜಿಲ್ಲಾ ಉಪಾಧ್ಯಕ್ಷ ನಿರಂಜನ್ ಎಸ್.ಹಿರೇಮಠ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ವಿಶೇಷ ವಿವಾಹ ಕಾಯ್ದೆ ಅಡಿಯಲ್ಲಿ ಮಧ್ಯಾಹ್ನ ನೋಂದಣಿ ಮಾಡಿಕೊಂಡಿದ್ದಾರೆ. ಆ ಬಳಿಕ ಮದುವೆಯ ಔತಣಕೂಟವನ್ನು ಏರ್ಪಡಿಸಲಾಗಿತ್ತು. ಇದರಲ್ಲಿ ಪಾಲ್ಗೊಂಡ ವಿವಿಧ ಸಂಘಟನೆಗಳ ಮುಖಂಡರು, ‘ಸೌಹಾರ್ದ ಪರಂಪರೆ ಮುಂದುವರಿಯಲಿ’ ಎಂದು ಶುಭ ಹಾರೈಸಿದರು.
‘ಕೋಮು ಸಾಮರಸ್ಯಕ್ಕೆ ಹಲವು ಅಡೆತಡೆಗಳು ಎದುರಾಗುತ್ತಿರುವ ಹೊತ್ತಿನಲ್ಲಿ ನಡೆದಿರುವ ಮದುವೆ ಕರ್ನಾಟಕದ ಮಟ್ಟಿಗೆ ಪ್ರಮುಖ ಘಟನೆ. ಸಾಮಾಜಿಕ ಸಾಮರಸ್ಯ ಮತ್ತು ದಾಂಪತ್ಯ ಸಾಮರಸ್ಯಕ್ಕೆ ದಂಪತಿಯು ಮಾದರಿಯಾಗಲಿ. ಅವರಿಗೆ ಎಲ್ಲರ ಬೆಂಬಲ ದೊರಕಲಿ’ ಎಂದು ಕನ್ನಡ ಪರ ಹೋರಾಟಗಾರ ಪ.ಮಲ್ಲೇಶ್, ಎಐಯುಟಿಯುಸಿ ಮುಖಂಡ ಶೇಷಾದ್ರಿ, ಲೇಖಕಿ ಲತಾ, ರೈತ ಸಂಘದ ಮುಖಂಡ ಹೊಸಕೋಟೆ ಬಸವರಾಜ್ ಪ್ರತಿಪಾದಿಸಿದರು.