ಯಾದಗಿರಿ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಆಟೋಮೊಬೈಲ್ ಶಾಪ್ ಧಗ ಧಗನೆ ಹೊತ್ತಿ ಉರಿದು, ಅಂಗಡಿಯಲ್ಲಿದ್ದ 25 ಲಕ್ಷಕ್ಕೂ ಅಧಿಕ ಪ್ರಮಾಣದ ವಸ್ತು ಬೆಂಕಿಗೆ ಆಹುತಿಯಾದ ಘಟನೆ ಯಾದಗಿರಿಯಲ್ಲಿ ನಡೆದಿದೆ.
ಜಿಲ್ಲೆಯ ಶಹಪುರ ಪಟ್ಟಣದಲ್ಲಿ ಈ ಅವಘಡ ಸಂಭವಿಸಿದೆ. ಬೀದರ್ ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಜಿತು ಸಿಂಗ್ ಎಂಬವರಿಗೆ ಸೇರಿರುವ ರಾಮದಾಸ್ ಆಟೋಮೊಬೈಲ್ ಶಾಪ್ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಸಂಪೂರ್ಣವಾಗಿ ಭಸ್ಮವಾಗಿದೆ. ಅವಘಡದಿಂದ ವಸ್ತುಗಳು ಮತ್ತು ಕಟ್ಟಡ ಮಾತ್ರ ನಾಶವಾಗಿದ್ದು, ಯಾವುದೇ ಜೀವಹಾನಿ ಆಗಿಲ್ಲ. ಬೆಂಕಿ ಪ್ರಮಾಣ ಜಾಸ್ತಿಯಿದ್ದ ಕಾರಣ ಅರ್ಧಗಂಟೆಯಲ್ಲಿ ಅಂಗಡಿ ಸಂಪೂರ್ಣ ಭಸ್ಮವಾಗಿದೆ.
ಬೆಂಕಿಯ ತೀವ್ರತೆ ಪಕ್ಕದ ಅಂಗಡಿಗೆ ವ್ಯಾಪಿಸುವ ಹೊತ್ತಿನಲ್ಲಿ ಸಮಯಕ್ಕೆ ಸರಿಯಾಗಿ ಆಗಮಿಸಿ ಬೆಂಕಿ ನಂದಿಸಿದ ಅಗ್ನಿಶಾಮಕ ದಳ, ಸಂಭವಿಸುತ್ತಿದ್ದ ದೊಡ್ಡ ಅಪಾಯವನ್ನು ತಡೆಗಟ್ಟಲು ಮುಂದಾಗಿದ್ದಾರೆ. ಶಹಪುರ ನಗರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಶಹಪುರ ಸಿಪಿಐ ಚೆನ್ನಯ್ಯ ಹಿರೇಮಠ ಭೇಟಿ ನೀಡಿ ಮಾಹಿತಿ ಪಡೆಯುತ್ತಿದ್ದಾರೆ.