ಶ್ರೀನಗರ: ಪ್ರಜಾಪ್ರಭುತ್ವವು ಜಮ್ಮು ಕಾಶ್ಮೀರದಲ್ಲಿ ತಳಹಂತದಲ್ಲಿಯೇ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ವಿಚಾರ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ 20,000 ಕೋಟಿ ರೂ. ಮೊತ್ತದ ಯೋಜನೆಗಳಿಗೆ ಚಾಲನೆ ನೀಡಿದ ಬಳಿಕ ಜಮ್ಮುವಿನ ಪಲ್ಲಿಯಲ್ಲಿ ಅವರು ಭಾನುವಾರ ಮಾತನಾಡಿದರು.
ಕಾಶ್ಮೀರದ ಜನತೆ ಪಡಬಾರದ ಯಾತನೆಗಳನ್ನು ಅನುಭವಿಸಿದ್ದಾರೆ. ಆದರೆ ಇನ್ನು ಮುಂದೆ ಅಂತಹ ಯಾತನಾಮಯ ಬದುಕು ಇಲ್ಲಿನ ಜನರಿಗೆ ಇಲ್ಲ ಎಂಬುದನ್ನು ನಾನು ಖಚಿತವಾಗಿ ಹೇಳುತ್ತೇನೆ. ಕಾಶ್ಮೀರದ ಯುವಕರ ಪೋಷಕರು, ಅಜ್ಜ-ಅಜ್ಜಿಯಂದಿರು ಅನುಭವಿಸಿದ ಕಷ್ಟವನ್ನು ನೀವು ಖಂಡಿತಾ ಅನುಭವಿಸುವುದಿಲ್ಲ. ಇದನ್ನು ನಾನು ನಿಮಗೆ ಖಚಿತವಾಗಿಯೇ ಹೇಳಬಲ್ಲೆ ಎಂದು ಮೋದಿ ಹೇಳಿದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ಈ ಬಾರಿ ಪಂಚಾಯತ್ ರಾಜ್ ದಿನ ಆಚರಿಸುತ್ತಿರುವುದು ಬಹುದೊಡ್ಡ ಬದಲಾವಣೆಯ ಸೂಚಕವಾಗಿದೆ. ಪ್ರಜಾಪ್ರಭುತ್ವವು ತಳಹಂತದಲ್ಲೇ ಕಾರ್ಯನಿರ್ವಹಿಸುವುದಕ್ಕೆ ಆರಂಭಿಸಿರುವುದು ಜಮ್ಮು ಮತ್ತು ಕಾಶ್ಮೀರಕ್ಕೆ ಲಭಿಸಿದ ದೊಡ್ಡ ಗೆಲುವಾಗಿದೆ. ಇದು ದೇಶವಾಸಿಗಳೆಲ್ಲರಿಗೂ ಹೆಮ್ಮೆಯ ವಿಷಯವೂ ಆಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟರು.
ಕೇಂದ್ರಾಡಳಿತ ಪ್ರದೇಶವು ಅಭಿವೃದ್ಧಿಯ ಹೊಸ ಶಖೆಗೆ ತೆರೆದುಕೊಂಡಿದೆ. ಕಳೆದ ಏಳು ದಶಕಗಳ ಅವಧಿಯಲ್ಲಿ, ಜಮ್ಮು-ಕಾಶ್ಮೀರಕ್ಕೆ ಸಿಕ್ಕಿದ ಖಾಸಗಿ ಹೂಡಿಕೆ ಕೇವಲ 17,000 ಕೋಟಿ ರೂ. ಆಗಿತ್ತು. ಆದರೆ ಈಗ 38,000 ಕೋಟಿ ರೂ.ಗೆ ಹೂಡಿಕೆ ಮೊತ್ತ ತಲುಪಿದೆ ಎಂದರು.
ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ರದ್ದತಿ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿಯವರು ಕಣಿವೆ ಪ್ರದೇಶಕ್ಕೆ ಭೇಟಿ ನೀಡಿದರು.