ಬೆಂಗಳೂರು: ನಟಿ ಸವಿ (ಸೌಜನ್ಯ) ಮಾದಪ್ಪ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಬಾಯ್ ಫ್ರೆಂಡ್ ಹಾಗೂ ಮೇಕಪ್ ಮೆನ್ ನನ್ನು ಕುಂಬಳಗೋಡು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೃತ ಸೌಜನ್ಯಾ ತಂದೆ ಪ್ರಭು ಮಾದಪ್ಪ ನೀಡಿದ ದೂರಿನ ಹಿನ್ನೆಲೆಯಲ್ಲಿ ಕಿರುತೆರೆ ನಟ ವಿವೇಕ್ ಹಾಗೂ ಮೇಕಪ್ ಬಾಯ್ ಮಹೇಶ್ ನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಸೌಜನ್ಯ ಆತ್ಮಹತ್ಯೆಗೂ ಒಂದು ತಾಸು ಮೊದಲು ನಡೆದಿದ್ದ ಆ ಘಟನೆಯೇ ಇಬ್ಬರ ವಿರುದ್ಧ ಎಫ್ಐಆರ್ ದಾಖಲಾಗಲು ಕಾರಣವಾಗಿದೆ.
ಇದನ್ನೂ ಓದಿ: ಕಿರುತೆರೆ ನಟಿ ಸೌಜನ್ಯ ಸಾವಿನ ಸುತ್ತ ಅನುಮಾನದ ಹುತ್ತ!
ಸೆ. 30 ರಂದು ನನ್ನ ಮಗಳು ಆತ್ಮಹತ್ಯೆಗೂ ಒಂದು ತಾಸು ಮುನ್ನ ಆಕೆಯ ಗೆಳೆಯ ಅಂತ ಹೇಳಿಕೊಂಡಿದ್ದ ವಿವೇಕ್ ನನ್ನ ಪತ್ನಿ ರೇಣುಕಾಗೆ ಕರೆ ಮಾಡಿದ್ದ. ನಿಮ್ಮ ಮಗಳು ನನ್ನನ್ನು ಮುದುವೆಯಾಗದಿದ್ದರೆ ತಲೆ ಹೊಡೆದು ಸಾಯಿಸುತ್ತೇನೆ ಎಂದು ಬೆದರಿಕೆ ಹಾಕಿದ್ದ. ಹೀಗೆ ಬೆದರಿಕೆ ಬಂದ ಒಂದು ತಾಸಿನ ಬಳಿಕ ನನ್ನ ಹಿರಿಯ ಮಗಳು ಭಾಗ್ಯಶ್ರೀ ನಮಗೆ ಕರೆ ಮಾಡಿ ನನ್ನ ಪುತ್ರಿ ಸಾವನ್ನಪ್ಪಿದ್ದಾಳೆ ಎಂಬ ಸಂಗತಿಯನ್ನು ತಿಳಿಸಿದಳು.
ಇದನ್ನೂ ಓದಿ: ಡೆತ್ನೋಟ್ ಬರೆದಿಟ್ಟು ಸ್ಯಾಂಡಲ್ವುಡ್ ನಟಿ ಆತ್ಮಹತ್ಯೆ ಶರಣು!
ನನ್ನ ಮಗಳನ್ನು ಮದುವೆಯಾಗುವಂತೆ ವಿವೇಕ್ ಪೀಡಿಸುತ್ತಿದ್ದ. ನನ್ನ ಮಗಳ ಸಾವಿಗೆ ವಿವೇಕ್ ಹಾಗೂ ಮಹೇಶ್ ಕಾರಣ. ಇವರ ಕಿರುಕುಳ ತಾಳಲಾರದೇ ನನ್ನ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆರ್ಥಿಕವಾಗಿ ಅವಳಿಗೆ ಯಾವ ಸಮಸ್ಯೆಯೂ ಇರಲಿಲ್ಲ. ಎರಡು ದಿನದ ಹಿಂದಷ್ಟೇ ನಾನೇ ಒಂದು ಲಕ್ಷ ರೂ. ಹಣವನ್ನು ಕೊಟ್ಟು ಕಳಿಸಿದ್ದೆ ಎಂದು ಮೃತ ಸೌಜನ್ಯಾಳ ತಂದೆ ಪ್ರಭು ಮಾದಪ್ಪ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ದೂರನ್ನು ಆಧರಿಸಿಯೇ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.