ಪುತ್ತೂರು: ವೃದ್ಧೆಯೋರ್ವರು ಮೂರು ದಿನಗಳ ಬಳಿಕ ಮತ್ತೆ ಮನೆ ಸೇರಿದ ಘಟನೆ ಹೊಸಮಜಲು ಸಮೀಪದ ದೋಂತಿಲಯಲ್ಲಿ ನಡೆದಿದೆ. ಕೌಕ್ರಾಡಿ ಗ್ರಾಮದ ಹೊಸಮಜಲು ಸಮೀಪದ ದೋಂತಿಲ ನಿವಾಸಿ ಐಸಮ್ಮ (80) ಮನೆಯಿಂದ ಸುಮಾರು 4 ಕಿ.ಮೀ. ದೂರದ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದ್ದಾರೆ.
ಈ ವೃದ್ದೆಯು ಮೂರು ರಾತ್ರಿ ಹಾಗೂ ಎರಡು ಹಗಲು ಕಾಡಿನಲ್ಲಿದ್ದ ಎಲೆಗಳನ್ನೇ ತಿಂದು ಸುರಕ್ಷಿತವಾಗಿ ಮನೆ ಸೇರಿದ್ದಾರೆ.
ಐಸಮ್ಮ ಅವರು ಸ್ವಲ್ಪ ಮಾನಸಿಕ ಅಸ್ವಸ್ಥೆಯಿಂದ ಬಳಲುತ್ತಿದ್ದರು. ಫೆ.28ರಂದು ಸಂಜೆ ಮನೆಯಿಂದ ನೆರೆ ಮನೆಗೆ ಹೊರಟವರು ನಾಪತ್ತೆಯಾಗಿದ್ದು, ರಾತ್ರಿಯಾದರೂ ಐಸಮ್ಮ ಅವರು ಮನೆಗೆ ಹಿಂದಿರುಗದೇ ಇದ್ದ ಹಿನ್ನೆಲೆಯಲ್ಲಿ ಅವರ ಮಗ ಮಹಮ್ಮದ್ ನೆರೆ ಮನೆಗಳಲ್ಲಿ, ವಿಚಾರಿಸಿದ್ದರು ಸಹ ಎಲ್ಲಿಯೂ ಪತ್ತೆಯಾಗಿರಲಿಲ್ಲ.
ಮಾ.3ರಂದು ಬೆಳಗ್ಗೆ ಹೊಸಮಜಲು ಹಾಲಿನ ಸೊಸೈಟಿಗೆ ಹಾಲು ತರುತ್ತಿದ್ದ ವೇಳೆ ಶಿಜು ಅವರಿಗೆ ಮಣ್ಣಗುಂಡಿ ಸಮೀಪದ ಏರ್ತಿಲ ರಕ್ಷಿತಾರಣ್ಯದಲ್ಲಿ ವೃದ್ಧೆಯೋರ್ವರು ಅಲೆದಾಡುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಮಾಹಿತಿ ಹರಡಿ ಹುಡುಕಾಡಿದಾಗ ನಾಪತ್ತೆಯಾಗಿದ್ದ ಐಸಮ್ಮರವರು ಪತ್ತೆಯಾಗಿದ್ದು ಬಳಿಕ ಮನೆಗೆ ಕರೆದುಕೊಂಡು ಬಂದಿದ್ದಾರೆ.