ನಾಳೆ ಭಾರತದ ಪಾಲಿಗೆ ವಿಶೇಷ ದಿನ. 75ನೇ ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಮುಂಜಾನೆ ಪ್ರಧಾನಮಂತ್ರಿ ಮೋದಿಯವರು, ಐತಿಹಾಸಿಕ ಕೆಂಪುಕೋಟೆಯ ಮೇಲೆ ರಾಷ್ಟ್ರಧ್ವಜ ಹಾರಿಸಲಿದ್ದಾರೆ. ಬಳಿಕ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಇವಿಷ್ಟು ಪ್ರತಿ ವರ್ಷ ಸ್ವಾತಂತ್ರ್ಯೋತ್ಸವದ ದಿನದಂದು ನಡೆಯುತ್ತದೆ. ಆದರೆ ಈ ಬಾರಿ ಧ್ವಜಾರೋಹಣದ ಸಂದರ್ಭದಲ್ಲಿ ವಿಶೇಷತೆಯೊಂದು ಇದೆ. ಇಷ್ಟು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಪ್ರಧಾನಮಂತ್ರಿಯವರು ಧ್ವಜಾರೋಹಣ ಮಾಡುತ್ತಿದ್ದಂತೆ ಸ್ಥಳದಲ್ಲಿ ಹೂವಿನ ಎಸಳುಗಳ ಸುರಿಮಳೆಯಾಗಲಿದೆ.
ಈ ಬಾರಿ ಭಾರತ ಸ್ವಾತಂತ್ರ್ಯ ದಿನಾಚರಣೆಯ ಅಮೃತಮಹೋತ್ಸವದ ಸಂಭ್ರಮದಲ್ಲಿದೆ. ಹೀಗೆ ಅಪಾರ ಪ್ರಮಾಣದಲ್ಲಿ ಹೂವಿನ ಎಸಳುಗಳನ್ನು ಮೇಲಿನಿಂದ ಉದಿರಿಸಲು ಎರಡು ಹೆಲಿಕಾಪ್ಟರ್ಗಳು ರೆಡಿಯಾಗಿವೆ. ರಾಷ್ಟ್ರ ಧ್ವಜಾರೋಹಣ ಆಗುತ್ತಿದ್ದಂತೆ ಭಾರತೀಯ ವಾಯುಸೇನೆಯ ಎಂಐ-17 1ವಿ (Mi-17 1V) ಎರಡು ಹೆಲಿಕಾಪ್ಟರ್ಗಳು ಹೂವಿನ ಎಸಳುಗಳ ಸುರಿಮಳೆ ಸುರಿಸಲಿವೆ. ಇದರಲ್ಲಿ ಮೊದಲನೇ ಹೆಲಿಕಾಪ್ಟರ್ನ ಕಮಾಂಡರ್ ಬಲ್ದೇವ್ ಸಿಂಗ್ ಬಿಶತ್ ಆಗಿದ್ದು ಎರಡನೇ ಹೆಲಿಕಾಪ್ಟರ್ನ ಕ್ಯಾಪ್ಟನ್ ವಿಂಗ್ ಕಮಾಂಡರ್ ನಿಖಿಲ್ ಮೆಹ್ರೋತ್ರಾ.
ರಾಷ್ಟ್ರ ಧ್ವಜಾರೋಹಣವಾಗುತ್ತಿದ್ದಂತೆ ಇವೆರಡೂ ಹೆಲಿಕಾಪ್ಟರ್ಗಳಿಂದ ಹೂವಿನ ಸಿಂಪಡಣೆ ಆಗಲಿದ್ದು, ನಂತರ ಪ್ರಧಾನ ಮಂತ್ರಿ ದೇಶವನ್ನುದ್ದೇಶಿಸಿ ಮಾತನಾಡುವರು. ಭಾಷಣದ ಬಳಿಕ ನ್ಯಾಷನಲ್ ಕೆಡೆಟ್ಸ್ ಕಾರ್ಪ್ಸ್(NCC) ರಾಷ್ಟ್ರಗೀತೆ ಹಾಡಲಿದೆ. ಭೂ, ನೌಕಾ ಮತ್ತು ವಾಯುಸೇನೆಯ ವಿವಿಧ ಶಾಲೆಗಳಿಂದ ಒಟ್ಟು 500 ಕೆಡೆಟ್ಗಳು ಈ ಹೊತ್ತಲ್ಲಿ ಪಾಲ್ಗೊಳ್ಳಲಿವೆ.
ಒಲಿಂಪಿಕ್ಸ್ ಅಥ್ಲೀಟ್ಗಳು ಭಾಗಿಇನ್ನು ಈ ಬಾರಿ ಒಲಿಂಪಿಕ್ಸ್ನಲ್ಲಿ ಭಾರತ ಅಮೋಘ ಸಾಧನೆ ಮಾಡಿದ್ದು, ಅದರಲ್ಲಿ ಪಾಲ್ಗೊಂಡ ಆಟಗಾರರನ್ನು ಕೆಂಪುಕೋಟೆಯ ಸ್ವಾತಂತ್ರ್ಯೋತ್ಸವಕ್ಕೆ ಆಹ್ವಾನಿಸಲಾಗಿದೆ. ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಸೇರಿ 32 ಅಥ್ಲೀಟ್ಗಳು ಪಾಲ್ಗೊಳ್ಳುವರು.
ಕೆಂಪುಕೋಟೆಯಲ್ಲಿ ಬಿಗಿ ಭದ್ರತೆ75ನೇ ಸ್ವಾತಂತ್ರ್ಯೋತ್ಸವ ಹಿನ್ನೆಲೆ ಕೆಂಪುಕೋಟೆಯಲ್ಲಿ ಬಿಗಿ ಭದ್ರತೆ ಮಾಡಲಾಗಿದೆ. ಎನ್ಎಸ್ಜಿ ಸ್ನಿಪರ್ಗಳು ಸೇರಿ, ವಿವಿಧ ಭದ್ರತಾ ಪಡೆಗಳ ಕಮಾಂಡೋಗಳನ್ನು ನೇಮಿಸಲಾಗಿದೆ. ಭಾರಿ ಬಿಗಿ ಬಂದೋಬಸ್ತ್ ಮಾಡಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಲಾಗಿದೆ.