- Advertisement -
- Advertisement -
ದಾವಣಗೆರೆ: ಮನೆಯಂಗಳದಲ್ಲಿ ಆಡುತ್ತಿದ್ದ ಮಗುವೊಂದು ನೀರು ತುಂಬಿದ ಬಕೆಟ್ನೊಳಗೆ ಬಿದ್ದು ಪ್ರಾಣ ಕಳೆದುಕೊಂಡಿದೆ. ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಬಿಸ್ತುವಳ್ಳಿ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ.
ಮಂಜುನಾಥ್ ಹಾಗೂ ತಾರಾ ಎನ್ನುವ ದಂಪತಿಗಳ ಪುತ್ರಿ ಅನುಶ್ರಾವ್ಯ ನೀರಿನಲ್ಲಿ ಉಸಿರುಗಟ್ಟಿ ಪ್ರಾಣ ಕಳೆದುಕೊಂಡ ಪುಟಾಣಿ.
ಮಗು ಅನುಶ್ರಾವ್ಯ ಮನೆಯ ಅಂಗಳದಲ್ಲಿ ಆಡುತ್ತಿದ್ದಳು. ಅಂಗಳದಲ್ಲಿ ನೀರು ತುಂಬಿದ ಬಕೆಟ್ ಇತ್ತು. ಮಗು ಆಯತಪ್ಪಿ ಬಕೆಟ್ಗೆ ಬಿದ್ದುಬಿಟ್ಟಿದೆ. ಕೂಡಲೇ ಮಗುವನ್ನು ಎತ್ತಿದರೂ ನೀರಿನಲ್ಲಿ ಉಸಿರುಗಟ್ಟಿದ ಮಗುವಿನ ಪ್ರಾಣ ಉಳಿಯಲಿಲ್ಲ. ನೀರಿಗೆ ಬಿದ್ದ ಮಗುವನ್ನು ಕೂಡಲೇ ಎತ್ತಿ ಜಗಳೂರಿನ ಸಾರ್ವಜನಿಕ ಆಸ್ಪತ್ರೆ ಗೆ ಒಯ್ಯಲಾಯಿತಾದರೂ ಹಾದಿಯಲ್ಲೇ ಮಗುವಿನ ಉಸಿರು ಸಂಪೂರ್ಣವಾಗಿ ನಿಂತಿತು.
ಆಟವಾಡುತ್ತಿದ್ದ ಪುಟ್ಟ ಮಗು ಕಣ್ಣೆದುರಲ್ಲೇ ಶವವಾದ ಊಹನಾತೀತ ಘಟನೆಯಿಂದ ಪೋಷಕರು ಕಂಗಾಲಾಗಿದ್ದು, ಅವರ ಆಕ್ರಂದನ ಮುಗಿಲು ಮುಟ್ಟಿದೆ. ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -