ಪಣಂಬೂರು: ಮಂಗಳೂರು ಬಂದರು , ಕೆಐಒಸಿಎಲ್, ತಣ್ಣೀರುಬಾವಿ ಸುತ್ತಮುತ್ತ ಇರುವ ಬೀಡಾಡಿ ಗೋವುಗಳನ್ನು ಸುರಕ್ಷಿತವಾಗಿ ಹಿಡಿದು ವಿವಿಧ ಗೋಶಾಲೆಗಳಿಗೆ ಕಳುಹಿಸಿಕೊಡುವ ಪ್ರಕ್ರಿಯೆನ್ನು ಪುನರಾರಂಭಿಸಲಾಗುತ್ತಿದೆ ಎಂದು ಶಾಸಕ ಡಾ. ಭರತ್ ಶೆಟ್ಟಿ ವೈ ಹೇಳಿದ್ದಾರೆ.
ಈಗಾಗಲೇ 12 ಗೋವುಗಳನ್ನು ಗೋಶಾಲೆಗೆ ಹಸ್ತಾಂತರಿಸಲಾಗಿದೆ. ಮುಂದಿನ ವಾರದಿಂದ ಮತ್ತಷ್ಟು ಗೋವುಗಳನ್ನು ಗೋಶಾಲೆಗಳಿಗೆ ಸ್ಥಳಾಂತರಿಸಲಾಗುತ್ತದೆ. ಬಂದರಿನಿಂದ ಸಾಗಾಟ ಮಾಡಲಾಗುವ ಯೂರಿಯಾ ಮತ್ತಿತರ ಸಾಮಗ್ರಿಗಳು ದಾರಿಯಲ್ಲಿ ಕೊಂಡು ಹೋಗುವ ವೇಳೆ ಹುಲ್ಲುಗಳ ಮೇಲೆ ಚೆಲ್ಲಿ ಅವುಗಳನ್ನು ತಿನ್ನುವ ಗೋವುಗಳು ಅನಾರೋಗ್ಯಕ್ಕೀಡಾಗುತ್ತಿದ್ದು, ಮಾತ್ರವಲ್ಲದೆ ರಸ್ತೆ ದಾಟುವಾಗ ಅಪಘಾತಕ್ಕೀಡಾಗಿ ಗೋವುಗಳು ಮತ್ತು ದ್ವಿಚಕ್ರ ಸವಾರರಿಗೆ ಅಪಾಯಗಳು ಉಂಟಾಗುತ್ತಿತ್ತು.
ಹೀಗಾಗಿ ಈ ಸುಧೀರ್ಘ ಸಮಸ್ಯೆಯನ್ನು ನಿವಾರಿಸಲು ವಿಎಚ್’ಪಿ ಬಜರಂಗದಳ, ಹಿಂದೂ ಜಾಗರಣ ವೇದಿಕೆ ಮುಖಂಡರು ಮನವಿ ಮಾಡಿದ ಮೇರೆಗೆ ಬಂದರು ಮಂಡಳಿ ಅಧ್ಯಕ್ಷರೊಂದಿಗೆ ಗೋ ಶಾಲೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಸಿದ್ದೇನೆ.
ಭವಿಷ್ಯದಲ್ಲಿ ಗೋ ಶಾಲೆ ನಿರ್ವಹಣೆ ಸಮಸ್ಯೆ ಎದುರಾಗುವ ಸಾಧ್ಯತೆಯ ಹಿನ್ನಲೆಯಲ್ಲಿ ನವ ಮಂಗಳೂರು ಬಂದರು ಮಂಡಳಿಯ ಸಹಕಾರದಲ್ಲಿ ಗೋವುಗಳನ್ನು ಸೂಕ್ತ ಗೋಶಾಲೆಗಳಿಗೆ ಸ್ಥಳಾಂತರಿಸುವ ಪ್ರಕ್ರಿಯೆ ಬಗ್ಗೆ ಹಿಂದೂ ಸಂಘಟನೆಗಳ ಮುಖಂಡರು, ಮಂಡಳಿ ಅಧ್ಯಕ್ಷರ ಜೊತೆ ಸಭೆ ನಡೆಸಿ ಮುಂದಿನ ವಾರದಿಂದ ಪುನರಾರಂಭಿಸಲಾಗುವುದು ಎಂದು ಹೇಳಿದ್ದಾರೆ.