ಸುರತ್ಕಲ್: ರಾಜ್ಯದ ಪಶ್ಚಿಮ ಕರಾವಳಿಗೆ ತೌಕ್ತೆ ಚಂಡಮಾರುತ ಅಪ್ಪಳಿಸಲಿದ್ದು ಶನಿವಾರ ಬೆಳಗಿನಿಂದ ಭಾರೀ ವರ್ಷಧಾರೆ, ಪ್ರಬಲ ಗಾಳಿಯಿಂದಾಗಿ ಸಮುದ್ರ ಉಕ್ಕೇರಿದ್ದು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ ದ ಶಾಸಕ ಡಾ.ಭರತ್ ಶೆಟ್ಟಿ ವೈ ಅವರು ಮುಕ್ಕ, ಸುರತ್ಕಲ್, ಬೈಕಂಪಾಡಿ ಸಹಿತ ಸಮುದ್ರತೀರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಸಮುದ್ರ ತೀರದುದ್ದಕ್ಕೂ ಭಾರೀ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿದ್ದು, ಮುಕ್ಕದಲ್ಲಿ ರಸ್ತೆಯವರೆಗೆ ಸಮುದ್ರದ ನೀರು ಅಪ್ಪಳಿಸಿ ರಸ್ತೆಗೆ ಅಪಾಯವುಂಟಾಗಿದೆ. ಸುರತ್ಕಲ್ ಲೈಟ್ ಹೌಸ್ ಬಳಿಯ ಫಿಶರೀಸ್ ರಸ್ತೆಯ ಸಣ್ಣ ತೋಡಿಗೆ ಕಟ್ಟಲಾದ ತಡೆಗೋಡೆ ಸಮುದ್ರಪಾಲಾಗುವ ಅಂಚಿನಲ್ಲಿದೆ.
ಬೈಕಂಪಾಡಿ ಕೂರಿಕಟ್ಟ, ಮೀನ ಖಲ್ಯದಲ್ಲಿ ಸಮುದ್ರದ ಕಲರವ ಹೆಚ್ಚಾಗಿದ್ದು, ಮನೆಗಳಿಗೆ ಅಪಾಯವಾಗುವ ಭೀತಿ ಎದುರಾಗಿದೆ.
ಈಗಾಗಲೇ ಶಾಸಕ ಮುನ್ಸೂಚನೆಯಂತೆ ಯಾವುದೇ ಸ್ಥಿತಿಯನ್ನು ಎದುರಿಸಲು ಎನ್ಡಿಆರ್ಎಫ್,ಸ್ಥಳೀಯ ರಕ್ಷಣಾ ತಂಡಗಳನ್ನು ಸನ್ನದ್ದ ಸ್ಥಿತಿಯಲ್ಲಿ ಇರಿಸಲಾಗಿದೆ.
ಕೂಳೂರು ಮತ್ತು ಮೀನಖಲ್ಯ ಗಂಜಿ ಕೇಂದ್ರ ಪ್ರದೇಶಕ್ಕೆ ಭೇಟಿ ನೀಡಿ ವ್ಯವಸ್ಥೆಯನ್ನು ಪರಿಶೀಲಿಸಿದರು, ಶಾಸಕರೊಂದಿಗೆ ಮಂಗಳೂರು ಮಹಾನಗರ ಪಾಲಿಕೆ ಸದಸ್ಯೆಯರಾದ ಶೋಭಾ ರಾಜೇಶ್, ಸುಮಿತ್ರಾ, ಸುನೀತಾ, ನಾಮನಿರ್ದೇಶಿತ ಸದಸ್ಯ ರಾಜೇಶ್ ಬೈಕಂಪಾಡಿ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.