ತ್ರಿಶ್ಯೂರ್: ಅಪಘಾತದ ಬಳಿಕ ಪಾರ್ಶ್ವವಾಯುವಿಗೆ ಒಳಗಾಗಿದ್ದ ಕೇರಳ ಮೂಲದ ಪ್ರಣವ್ ನಿನ್ನೆ (ಫೆ.17) ಕೊನೆಯುಸಿರೆಳೆದಿದ್ದಾರೆ. ಪ್ರಣವ್ಗೆ 31 ವರ್ಷ ವಯಸ್ಸಾಗಿತ್ತು. ತನ್ನ ಪ್ರೇಮ ವಿವಾಹದಿಂದಲೇ ಕೇರಳದಲ್ಲಿ ಮಾತ್ರವಲ್ಲದೆ, ಎಲ್ಲೆಡೆ ಸುದ್ದಿ ಮಾಡಿದ್ದರು.
ಪ್ರಣವ್, ತ್ರಿಶ್ಯೂರ್ನ ಕನ್ನಿಕ್ಕರ ಮೂಲದ ನಿವಾಸಿ. ಶುಕ್ರವಾರ ಬೆಳಗ್ಗೆ ರಕ್ತ ವಾಂತಿ ಮಾಡಿಕೊಂಡ ಪ್ರಣವ್ನನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಪ್ರಣವ್ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಸಕ್ರಿಯರಾಗಿದ್ದರು. ತಿರುವನಂತಪುರದ ಶಹಾನಾ ಎಂಬಾಕೆಯನ್ನು 2020ರ ಮಾರ್ಚ್ ತಿಂಗಳಲ್ಲಿ ಮದುವೆಯಾಗಿದ್ದರು. ಇವರಿಬ್ಬರ ಮದುವೆ ರಾಷ್ಟ್ರದಾದ್ಯಂತ ಸುದ್ದಿಯಾಗಿ, ಶಹಾನಾಳನ್ನು ಎಲ್ಲರು ಮೆಚ್ಚಿಕೊಂಡು ಕೊಂಡಾಡಿದ್ದರು. ಇಬ್ಬರು ಪ್ರಣವ್-ಶಹಾನಾ ಎಂದು ಖ್ಯಾತಿಯಾಗಿದ್ದರು. ಮನೆಯವರ ಭಾರೀ ವಿರೋಧದ ನಡುವೆಯೂ ಶಹಾನಾ, ಪ್ರಣವ್ನನ್ನು ಮದುವೆಯಾಗಿದ್ದಳು. ಸಾಮಾಜಿಕ ಜಾಲತಾಣದಲ್ಲಿ ಬೆಳೆದ ಸ್ನೇಹ, ಪ್ರೀತಿಗೆ ತಿರುಗಿ, ಮದುವೆಯಲ್ಲಿ ಅಂತ್ಯವಾಗಿತ್ತು.
8 ವರ್ಷಗಳ ಹಿಂದೆ ನಡೆದ ಅಪಘಾತವೊಂದರಲ್ಲಿ ಪ್ರಣವ್ ಗಂಭೀರವಾಗಿ ಗಾಯಗೊಂಡಿದ್ದ. ಇದಾದ ಬಳಿಕ ಆತನಿಗೆ ಸೊಂಟದಿಂದ ಕೆಳಗಿನ ಭಾಗ ಪಾರ್ಶ್ವವಾಯುವಿಗೆ ಒಳಗಾಗಿತ್ತು. ನಿಯಂತ್ರಣ ಕಳೆದುಕೊಂಡ ಬೈಕ್ ಗೋಡೆ ಡಿಕ್ಕಿ ಹೊಡೆದು ದುರಂತ ಸಂಭವಿಸಿತ್ತು. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಣವ್ ಹಂಚಿಕೊಂಡಿದ್ದರು. ಅಲ್ಲದೆ, ರಸ್ತೆ ಸುರಕ್ಷತೆ ಬಗ್ಗೆ ಜಾಲತಾಣದಲ್ಲಿ ಸದಾ ಜಾಗೃತಿ ಮೂಡಿಸುತ್ತಿದ್ದರು.
ಇಬ್ಬರ ಪ್ರೀತಿಗೆ ಅಪಘಾತವು ಬರ ಸಿಡಿಲಂತೆ ಬಂದೆರಗಿದರು ಧೃತಿಗೆಡದ ಶಹಾನಾ ಧರ್ಮ, ಪ್ರದೇಶ ಮತ್ತು ಇತರ ಹಲವು ಅಡೆತಡೆಗಳನ್ನು ಮೀರಿ ತನ್ನ ಮನೆಯವರ ವಿರೋಧದ ನಡುವೆಯೂ ಪ್ರಣವ್ ಕೈಹಿಡಿಯುವ ಮೂಲಕ ನಿಜವಾದ ಪ್ರೀತಿಗೆ ಜ್ವಲಂತ ಉದಾಹರಣೆಯಾದರು. ಇಬ್ಬರು ಸಂತೋಷದ ಜೀವನವನ್ನೂ ನಡೆಸುತ್ತಿದ್ದರು. ಆದರೆ, ವಿಧಿಯಾಟ ಇಂದು ಇಬ್ಬರನ್ನು ಬೇರೆ ಮಾಡಿದೆ. ನಿನ್ನೆ ರಕ್ತ ವಾಂತಿ ಮಾಡಿಕೊಂಡು ಪ್ರಣವ್ ಕೊನೆಯುಸಿರೆಳೆದಿದ್ದಾರೆ.
ಶಹಾನಾ ಜೊತೆಗಿನ ಸಂತಸದ ಕ್ಷಣಗಳನ್ನು ಪ್ರಣವ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದರು. ಇತ್ತೀಚೆಗಷ್ಟೇ ಶಹಾನಾ ಮುಖವನ್ನು ತನ್ನ ಎದೆಯ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದರು ಮತ್ತು ಅದನ್ನು ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದರು.