ಪಿ.ಎಂ.-ಕಿಸಾನ್ ಯೋಜನೆಯಡಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಆರ್ಥಿಕ ಸೌಲಭ್ಯ ಪಡೆಯಲು ಬಯೋಮೆಟ್ರಿಕ್ ಆಧಾರಿತ ಇ-ಕೆ.ವೈ.ಸಿ (E KYC) ಮಾಡುವುದು ಕಡ್ಡಾಯವಾಗಿದೆ. ಆಗಸ್ಟ್ 31ರೊಳಗೆ ಕೆ.ವೈ.ಸಿ. ಮಾಡಿಸುವಂತೆ ಜಿಲ್ಲೆಯ ರೈತ ಬಾಂಧವರಲ್ಲಿ ಕಲಬುರಗಿ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಅವರು ಮನವಿ ಮಾಡಿದ್ದಾರೆ.
ಪಿ.ಎಂ. ಕಿಸಾನ್ ಯೋಜನೆಯಡಿ ಜಿಲ್ಲೆಯಲ್ಲಿ ನೋಂದಣಿಯಾದ 2,68,015 ರೈತರ ಪೈಕಿ 99,545 ರೈತರು ಮಾತ್ರ ನೋಂದಣಿ ಮಾಡಿಕೊಂಡಿದ್ದಾರೆ. ಉಳಿದ ರೈತರು ನಿಗಧಿತ ಅವಧಿಯಲ್ಲಿ “ಗ್ರಾಮ ಒನ್ ” ಅಥವಾ “ನಾಗರಿಕ ಸೇವಾ ಕೇಂದ್ರಗಳ ಮೂಲಕ ಕೆ.ವೈ.ಸಿ ಮಾಡಿಕೊಳ್ಳದಿದ್ದಲ್ಲಿ ಅಂತಹ ರೈತರಿಗೆ ಆರ್ಥಿಕ ಸೌಲಭ್ಯ ದೊರೆಯುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು ಕಳೆದ ವರ್ಷ ಈ ಯೋಜನೆಯಡಿ ರೈತರಿಗೆ 772 ಕೋಟಿ ರೂ. ಆರ್ಥಿಕ ನೆರವು ನೀಡಲಾಗಿದೆ ಎಂದರು.
ಪ್ರಸಕ್ತ 2022-23ನೇ ಸಾಲಿಗೆ ಜಿಲ್ಲೆಯಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ 2,14,749 ಜನ ರೈತರು ದಾಖಲೆ ಪ್ರಮಾಣದಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಸ್ಥಳೀಯ ನಿರ್ದಿಷ್ಟ ವಿಕೋಪದಡಿ 40,527 ರೈತರು ದೂರು ನೀಡಿರುವ ಹಿನ್ನೆಲೆಯಲ್ಲಿ 24,551 ರೈತರ ಹೊಲದಲ್ಲಿ ಜಂಟಿ ಸಮೀಕ್ಷೆ ನಡೆಸಿದ್ದು, 16,476 ರೈತರ ಬೆಳೆಗಳು ಸಮೀಕ್ಷೆಗೆ ಬಾಕಿ ಇವೆ.
ಮಳೆ ಬಿದ್ದ ನಂತರ 72 ಗಂಟೆ ಒಳಗಾಗಿ ರೈತರು ಟೋಲ್ ಫ್ರೀ ಸಂಖ್ಯೆ 100-200-5142ಗೆ ಕರೆ ಮಾಡಿ ದೂರು ನೀಡಿದಲ್ಲಿ ವಿಮಾ ಕಂಪನಿಯವರು ಸಮೀಕ್ಷೆಗೆ ಬರುತ್ತಾರೆ. ಜಿಲ್ಲೆಯ ರೈತರ ಹಿತದೃಷ್ಟಿಯಿಂದ ಜಿಲ್ಲಾ ಕೇಂದ್ರದಲ್ಲಿ ಕಾಲ್ ಸೆಂಟರ್ ತೆರೆಯಲಾಗುವುದು, ಕಳೆದ ವರ್ಷ ಈ ವಿಮೆ ಯೋಜನೆಯಡಿ ಜಿಲ್ಲೆಯ 9 ಸಾವಿರ ಜನರಿಗೆ ಪರಿಹಾರ ಕಲ್ಪಿಸಿದ ಎಂದು ಡಿ.ಸಿ. ಯಶವಂತ ಎ. ಗುರುಕರ್ ತಿಳಿಸಿದರು.