ನಿರ್ಮಲಾನಂದ ಶ್ರೀಗಳ ಭೇಟಿಯಾದ ಒಕ್ಕಲಿಗ ಗೌಡ ಸಮುದಾಯದ ಮುಖಂಡರು
ಪುತ್ತೂರು: ಮುಂಬರುವ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಹಾಲಿ ಶಾಸಕ ಸಂಜೀವ ಮಠಂದೂರು ಅವರನ್ನೇ ಶಾಸಕ ಅಭ್ಯರ್ಥಿಯಾಗಿ ಘೋಷಿಸಬೇಕು. ಸಂಜೀವ ಮಠಂದೂರು ಅವರನ್ನು ಹೊರತುಪಡಿಸಿ ಯಾರನ್ನೇ ಶಾಸಕ ಅಭ್ಯರ್ಥಿ ಎಂದು ಘೋಷಿಸಿದರೂ ಅದು ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆ ಮೇಲೆ ಪರಿಣಾಮ ಬೀರುವುದು ಖಂಡಿತಾ ಎಂದು ಒಕ್ಕಲಿಗ ಗೌಡ ಸಮುದಾಯದ ಮುಖಂಡರು ಆದಿಚುಂಚನಗಿರಿ ಕ್ಷೇತ್ರದ ಪೀಠಾಧಿಪತಿ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರ ಗಮನಕ್ಕೆ ತಂದಿದ್ದಾರೆ.
ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರನ್ನು ಭೇಟಿಯಾಗಿ ಮಾತನಾಡಿದ ಒಕ್ಕಲಿಗ ಗೌಡ ಸಮುದಾಯದ ನಿಯೋಗ, ಪುತ್ತೂರಿನಲ್ಲಿ ಈ ಹಿಂದೆ ಕಂಡು ಕೇಳರಿಯದ ಅಭಿವೃದ್ಧಿ ಕೆಲಸಗಳು ನಡೆದಿವೆ. ಶಾಸಕ ಸಂಜೀವ ಮಠಂದೂರು ಅವರು ದಿನದ ತನ್ನ ಇಡೀ ಸಮಯವನ್ನು ಕ್ಷೇತ್ರದ ಅಭಿವೃದ್ಧಿಗಾಗಿಯೇ ವಿನಿಯೋಗಿಸಿದ್ದಾರೆ. ಪುತ್ತೂರು ಜಿಲ್ಲಾ ಕೇಂದ್ರ ಆಗಬೇಕು ಎಂಬ ಆಶಯಕ್ಕೆ ಪೂರಕವಾಗಿ ದೊಡ್ಡ ಯೋಜನೆಗಳಿಗೆ ಈಗಾಗಲೇ ಅಡಿಪಾಯ ಹಾಕಲಾಗಿದೆ. ಆದುದರಿಂದ ಹಾಲಿ ಶಾಸಕ ಸಂಜೀವ ಮಠಂದೂರು ಅವರೇ ಮುಂದಿನ ಶಾಸಕ ಅಭ್ಯರ್ಥಿ ಆಗಬೇಕು. ಇವರನ್ನು ಹೊರತುಪಡಿಸಿ ಬೇರೆ ಯಾವುದೇ ಅಭ್ಯರ್ಥಿಯನ್ನು ಘೋಷಣೆ ಮಾಡಿದರೂ, ಉಗ್ರವಾಗಿ ಖಂಡಿಸಲಾಗುವುದು ಹಾಗೂ ಹೋರಾಟವನ್ನು ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆಯನ್ನು ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರ ಮೂಲಕ ಬಿಜೆಪಿ ಹೈಕಮಾಂಡ್ ಗೆ ತಲುಪಿಸಿದ್ದಾರೆ ಎಂದು ಹೇಳಲಾಗಿದೆ.
ಕೇಂದ್ರದ ಹಿರಿಯ ನಾಯಕರಿಂದ ಹಿಡಿದು ಗ್ರಾಮ ಪಂಚಾಯತಿನ ಸದಸ್ಯನವರೆಗೂ ಎಲ್ಲಾ ಜನಪ್ರತಿನಿಧಿಗಳ ಮೇಲೂ ಆರೋಪಗಳು ಇದ್ದದ್ದೇ. ಅಭಿವೃದ್ಧಿ ಕಾರ್ಯ ಮಾಡುವವರ ಮೇಲಂತೂ ಆರೋಪಗಳ ಸುರಿಮಳೆ ಹೆಚ್ಚಾಗಿಯೇ ಇರುತ್ತದೆ. ಹಾಗೇ ನೋಡಿದರೆ ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಸಹಿಸಿ ಕೊಳ್ಳಲು ಆಗದೇ ಇರುವವರು ಆರೋಪ ಮಾಡುತ್ತಾರೆ. ರಾಜ್ಯದ ಹಿರಿಯ ನಾಯಕರಾಗಿರುವ ಯಡಿಯೂರಪ್ಪ ಅವರ ವಿರುದ್ಧವೂ ಆರೋಪಗಳನ್ನು ಮಾಡುತ್ತಿದ್ದಾರೆ. ಇದು ಜನಪ್ರತಿನಿಧಿಗಳ ಮೇಲೆ ಬರುವ ಸಹಜ ಆರೋಪಗಳು. ಹಾಗೆಂದು ಅವರ ಅಭಿವೃದ್ಧಿ ಕಾರ್ಯಗಳನ್ನು, ಸಂಘಟನೆ ವಿಚಾರಗಳನ್ನು ಬದಿಗೊತ್ತಲು ಸಾಧ್ಯವಾಗದು. ಅದೇ ರೀತಿ ಸಂಜೀವ ಮಠಂದೂರು ಅವರು ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದರೂ, ಸಣ್ಣ ಪುಟ್ಟ ಆರೋಪಗಳನ್ನು ಅಲ್ಲಲ್ಲಿ ಮಾಡುತ್ತಾರೆ. ಇದೇ ಕಾರಣವನ್ನು ಮುಂದಿಟ್ಟುಕೊಂಡು, ಪುತ್ತೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಸ್ಥಾನದಿಂದ ಅವರನ್ನು ದೂರವಿಟ್ಟರೆ ಅದನ್ನು ಒಕ್ಕಲಿಗ ಗೌಡ ಸಮುದಾಯ ಸಹಿಸದು ಎನ್ನುವುದನ್ನು ಬಿಜೆಪಿ ಹೈಕಮಾಂಡ್ ಅರ್ಥವಿಸಿಕೊಳ್ಳಬೇಕು ಎಂಬ ವಿಚಾರವನ್ನು ಸ್ವಾಮೀಜಿ ಗಮನಕ್ಕೆ ತಂದಿದ್ದಾರೆ.