ಪುತ್ತೂರು : ರಾಷ್ಟ್ರೀಯ ತನಿಖಾ ಸಂಸ್ಥೆ NIA ತಂಡ ಸಂಚರಿಸುತಿದ್ದ ಪೊಲೀಸ್ ವಾಹನ ಹಾಗೂ ಬೈಕ್ ನಡುವೆ ಅಪಘಾತ ನಡೆದು ಸವಾರ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ.
ಬೈಕ್ ಸವಾರ, ಪಾಣಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿಯಾಗಿರುವ 50 ವರ್ಷದ ಲಕ್ಷ್ಮ ಣ ನಾಯ್ಕ ಬಿ. ಎಂಬವರು ಪೊಲೀಸ್ ವಾಹನಕ್ಕೆ ಬೈಕ್ ಗೆ ಡಿಕ್ಕಿ ಹೊಡೆದು ಮೃತಪಟ್ಟ ದುರ್ದೈವಿಯಾಗಿದ್ದಾರೆ. ಇಲ್ಲಿನ ಮಾಣಿ ಮೈಸೂರು ರಸ್ತೆಯ ಸಂಪ್ಯ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಭಾನುವಾರ ರಾತ್ರಿ ವಿಶೇಷ ತನಿಖೆಯ ದೃಷ್ಠಿಯಿಂದ ಸಂಚರಿಸುತ್ತಿದ್ದ ಎನ್. ಐ.ಎ. ತಂಡದ ಪೊಲೀಸ್ ವಾಹನ ಬೈಕ್ವೊಂದಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ರಸ್ತೆಗೆ ಬಿದ್ದ ಲಕ್ಷ್ಮಣ ಬಿ. ನಾಯ್ಕ ಕೊನೆಯುಸಿರೆಳೆದಿದ್ದಾರೆ.
ಬಿಜೆಪಿಯ ಯುವ ಮೋರ್ಚಾದ ಮುಖಂಡ ಪ್ರವೀಣ್ ನೆಟ್ಟಾರ್ ಅವರ ಕೊಲೆ ಪ್ರಕರಣ ಸಂಬಂಧ ಎನ್ಐಎ ಅಧಿಕಾರಿಗಳ ತಂಡ ಪುತ್ತೂರಿಗೆ ಆಗಾಗ ಆಗಮಿಸುತ್ತದೆ. ಆಗ ರಾಜ್ಯ ಪೊಲೀಸ್ ವಾಹನವನ್ನು ಅವರ ಸಂಚಾರಕ್ಕೆ ಬಳಸಿಕೊಳ್ಳಲಾಗುತ್ತದೆ ಎಂಬ ಮಾಹಿತಿ ಲಭಿಸಿದೆ. ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು ,ತನಿಖೆ ಮುಂದುವರೆದಿದೆ.