ಪೆರ್ಲ: ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ರೈಲ್ವೇ ಹಳಿಯಲ್ಲಿ ಗುರುವಾರ ಬೆಳಗ್ಗೆ ಪತ್ತೆಯಾದ ವ್ಯಕ್ತಿಯ ಗುರುತು ಪತ್ತೆಯಾಗಿದೆ. ಪೆರ್ಲ ಸಮೀಪದ ಕಾಟುಕುಕ್ಕೆಯ ಬಾಡಿಗೆ ಮನೆ ನಿವಾಸಿ ಶಿವಣ್ಣ@ ಶಿವರಾಮ ಭಟ್ಟರ ಶವ ಎಂಬುದು “ಕಡಲ ತೀರದ ಪತ್ರಕರ್ತರು” ಎಂಬ ವಾಟ್ಸಪ್ ಗ್ರೂಪಿನಿಂದಾಗಿ ಪತ್ತೆಯಾಗಿದೆ.
ಗಂಗೊಳ್ಳಿಯ ಸಾಮಾಜಿಕ ಕಾರ್ಯಕರ್ತರೊಬ್ಬರು ಪೋಟೋ, ವಿವರಗಳನ್ನು ಪೋಸ್ಟ್ ಮಾಡಿದ್ದರು. ಇದರಿಂದಾಗಿ ಕಾಟುಕುಕ್ಕೆಯ ವ್ಯಕ್ತಿಯದ್ದೆಂಬುದು ಪತ್ತೆಯಾಗಿದೆ. ಅವಿವಾಹಿತರಾದ ಶಿವರಾಮ ಭಟ್ಟರು ಕಳೆದ ಹದಿನೈದು ದಿನಗಳ ಹಿಂದೆ ಬೆಂಗಳೂರಿಗೆ ಹೋಗುತ್ತೇನೆಂದು ಪರಿಚಯಸ್ಥರಲ್ಲಿ ಹೇಳಿ ತನ್ನ CD100 ಬೈಕಿನಲ್ಲಿ ತೆರಳಿದ್ದರೆನ್ನಲಾಗಿದೆ. ಆ ಬಳಿಕ ಭಟ್ಟರ ಮಾಹಿತಿ ಲಭ್ಯವಾಗಿಲ್ಲ ಎನ್ನಲಾಗಿದೆ.
ಗುರುವಾರ ಬೆಳಗ್ಗೆ ರೈಲ್ವೇ ಹಳಿಯಲ್ಲಿ ಜರ್ಝರಿತ ಸ್ಥಿತಿಯಲ್ಲಿ ಅಪರಿಚಿತ ಮೃತದೇಹ ಪತ್ತೆಯಾಗಿತ್ತು. ಮಧ್ಯಾಹ್ನದ ಹೊತ್ತಿಗೆ ಮೃತರ ಸಂಬಂಧಿಗಳು ಗಂಗೊಳ್ಳಿ ಪೊಲೀಸರ ಸಂಪರ್ಕಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೃತರ ಮರಣೋತ್ತರ ಪರೀಕ್ಷೆಯ ಬಳಿಕ ಸಂಬಂಧಿಕರ ವಶಕ್ಕೆ ನೀಡಲಾಗಿದ್ದು ಗಂಗೊಳ್ಳಿ ಠಾಣೆಯಲ್ಲಿ ಅಸಹಜ ಸಾವಿನ ಪ್ರಕರಣ ದಾಖಲಾಗಿದೆ.
ಈ ಮಧ್ಯೆ ಮೃತ ಶಿವರಾಮ ಭಟ್ಟರು ವಿಪರೀತ ಸಾಲದ ಸುಳಿಯಲ್ಲಿ ಸಿಲುಕಿದ್ದರೆಂಬ ಮಾಹಿತಿ ಸಾರ್ವಜನಿಕರಿಂದ ಲಭಿಸಿದ್ದು ಇದೇ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡರೇ ಎಂಬುದು ಪೊಲೀಸರ ತನಿಖೆಯಿಂದ ಬಯಲಾಗಬೇಕಿದೆ.