ಪ್ರವೀಣ್ ನೆಟ್ಟಾರು ಹತ್ಯೆ ಪುಕರಣದಲ್ಲಿ ನೇರವಾಗಿ ಭಾಗಿಯಾದ ಮೂವರು ಆರೋಪಿಗಳ ಗುರುತು ಪತ್ತೆಹಚ್ಚಲಾಗಿದೆ ಎಂದು ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅಲೋಕ್ ಕುಮಾರ್ ಮೂವರ ಹೆಸರು, ವಿಳಾಸ, ಭಾವಚಿತ್ರ ದೊರೆತಿದೆ. ಆರೋಪಿಗಳು ಬಚ್ಚಿಟ್ಟುಕೊಂಡಿದ್ದು, ಅವರ ವಿರುದ್ಧ ಬಂಧನ ವಾರಂಟ್ ಹೊರಡಿಸಿ ಆಸ್ತಿ ಮುಟ್ಟುಗೋಲು ಹಾಕಲು ಚಿಂತನೆ ನಡೆಯುತ್ತಿದೆ ಎಂದಿದ್ದಾರೆ.
ಮುಖ್ಯ ಆರೋಪಿಗಳು ಮನೆ ಖಾಲಿ ಮಾಡಿ ತಲೆಮರೆಸಿಕೊಂಡಿದ್ದು, ಶೀಘ್ರವಾಗಿ ಅವರನ್ನು ಬಂಧಿಸಲಾಗುವುದು. ಆರೋಪಿಗಳು ತಲೆಮರೆಸಿಕೊಳ್ಳಲು ಸಹಕಾರ ನೀಡಿದವರನ್ನೂ ದಸ್ತಗಿರಿ ಮಾಡುತ್ತೇವೆ. ಕರ್ನಾಟಕ ಪೊಲೀಸ್ ಮತ್ತು ಎನ್ಐಎ ಜತೆಯಾಗಿ ತನಿಖೆ ನಡೆಸುತ್ತಿದ್ದೇವೆ. ಈಗಾಗಲೇ ಬಂಧಿತ ಆರೋಪಿಗಳಿಗೆ ಪಿಎಫ್ಐ ಜತೆ ಲಿಂಕ್ ಬಗ್ಗೆ ಶಂಕೆ ಇದೆ. ಈ ಬಗ್ಗೆ ಸಾಕ್ಷ್ಯ ಸಂಗ್ರಹಿಸಿದ್ದೇವೆ. ಆರೋಪ ಪಟ್ಟಿಯಲ್ಲಿ ಈ ಬಗ್ಗೆ ದಾಖಲೆ ಸೇರ್ಪಡೆ ಮಾಡಲಾಗುವುದು ಎಂದರು.
ಪ್ರಕರಣದ ಮುಂದಿನ ತನಿಖೆ ಹಾಗೂ ಮುಖ್ಯ ಆರೋಪಿಗಳ ಬಂಧನ ಬಗ್ಗೆ ಬೆಳ್ಳಾರೆಯಲ್ಲಿ ಬುಧವಾರ ಸಭೆ ನಡೆಸಲಾಗುತ್ತಿದೆ. ದ.ಕ.ಜಿಲ್ಲಾ ಪೊಲೀಸ್, ಮಂಗಳೂರು ನಗರ ಪೊಲೀಸ್, ಹಾಸನ, ಮಂಡ್ಯ ಸಹಿತ ಎಂಟು ಜಿಲ್ಲೆಗಳ ಪೊಲೀಸ್ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಎಡಿಜಿಪಿ ಮಾಹಿತಿ ನೀಡಿದರು.