ತುಮಕೂರು: ಪತಿಯ ಸಾವಿನ ನಂತರ ಮನೆಯೊಳಗೆ ಸೇರಿಸುತ್ತಿಲ್ಲವೆಂದು ಪತ್ನಿ ತನ್ನ ಪುಟ್ಟ ಮಗುವಿನೊಂದಿಗೆ ಪತಿಯ ಮನೆ ಮುಂದೆ ಧರಣಿ ನಡೆಸುತ್ತಿರುವ ಘಟನೆ ವಿದ್ಯಾನಗರದ 4ನೇ ಕ್ರಾಸ್ನಲ್ಲಿ ನಡೆದಿದೆ.
ಪತಿ ಜಿತೇಂದ್ರ ಕುಮಾರ್ ಮೂರು ತಿಂಗಳ ಹಿಂದೆ ಅನಾರೋಗ್ಯದಿಂದ ನಿಧನ ಹೊಂದಿದ್ದರು. ಬಳಿಕ ಪತಿಯ ಸಹೋದರಿಯರು ನನ್ನನ್ನು ಮನೆಗೆ ಸೇರಿಸುತ್ತಿಲ್ಲ ಎಂದು ಪತ್ನಿ ಮಂಜುಳಾ ಆರೋಪಿಸಿದ್ದಾರೆ.
2019ರಲ್ಲಿ ಮಂಜುಳಾ ಮತ್ತು ಜಿತೇಂದ್ರ ಪ್ರೀತಿಸಿ ಅಂತರ್ಜಾತಿ ವಿವಾಹವಾಗಿದ್ದರು. ಇವರ ವಿವಾಹಕ್ಕೆ ಮನೆಯವರ ವಿರೋಧವಿತ್ತು. ಬಳಿಕ ಬಾಡಿಗೆ ಮನೆ ಮಾಡಿ ಬೆಂಗಳೂರಿನಲ್ಲಿ ವಾಸವಾಗಿದ್ದರು. ಆಗಾಗ ತುಮಕೂರಿನ ಮನೆಗೆ ಬಂದು ಹೋಗುತ್ತಿದ್ದರು. ಈ ದಂಪತಿಗೆ ಎರಡೂವರೆ ವರ್ಷದ ಹೆಣ್ಣು ಮಗುವಿದೆ.
ಜಿತೇಂದ್ರ ತುಮಕೂರಿನಲ್ಲಿ ರೈಸ್ಮಿಲ್ ಮಾಲೀಕರಾಗಿದ್ದರು. ಕೋಟ್ಯಂತರ ರೂಪಾಯಿ ಆಸ್ತಿ ಹೊಂದಿದ್ದರು ಎನ್ನಲಾಗಿದೆ. ಇವರಿಗೆ 5 ಜನ ಸಹೋದರಿಯರಿದ್ದು, ತುಮಕೂರಿನ ವಿದ್ಯಾನಗರದ ಮನೆಯಲ್ಲಿ ವಾಸವಾಗಿದ್ದಾರೆ. ಇದೀಗ ಸಹೋದರನ ಸಾವಿನ ನಂತರ ಆಸ್ತಿಯನ್ನು ಹೆಂಡತಿಗೆ ಕೊಡಬೇಕಾಗುತ್ತದೆ ಎಂದು ಸಹೋದರಿಯರು ಮನೆಯೊಳಗೆ ಸೇರಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂದು ಪತ್ನಿ ಮಂಜುಳಾ ಆರೋಪಿಸಿದ್ದಾರೆ.