ಬಂಟ್ವಾಳ: ಮಹಿಳೆಯೊಬ್ಬರಿಗೆ ಬಲ್ಗೇರಿಯಾದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ 6.30 ಲಕ್ಷ ಮೊತ್ತ ಪಡೆದು ವಂಚಿಸಿದ ಘಟನೆ ನಡೆದಿದೆ.
ಮಂಗಳೂರು ಬಿಜೈ ಹೊಸ ರಸ್ತೆ 2ನೇ ಅಡ್ಡ ರಸ್ತೆ ನಿವಾಸಿ ವಿ.ಆರ್. ಸುಧೀರ್ ರಾವ್ ವಂಚಿಸಿದ ಆರೋಪಿ ಎಂದು ಗುರುತಿಸಲಾಗಿದೆ.
ಬಂಟ್ವಾಳದ ಕಳ್ಳಿಗೆ ಗ್ರಾಮದ ತೊಡಂಬಿಲ ನಿವಾಸಿ ನೆಲ್ಲಿ ಲೀನಾ ಮೊಂತೊರೊ ಅವರಿಗೆ ಸಂಬಂಧಿ ಮಹಿಳೆ ಮೂಲಕ ಸುಧೀರ್ರಾವ್ನ ಪರಿಚಯವಾಗಿತ್ತು. ನಂತರ ನೆಲ್ಲಿ ಲೀನಾ ಮೊಂತೊರೊ ಮಕ್ಕಳಿಗೆ ಬಲ್ಗೇರಿಯಾದಲ್ಲಿ ಕೆಲಸ ಕೊಡಿಸುವುದಾಗಿ ವಿ.ಆರ್. ಸುಧೀರ್ ತನ್ನ ಬ್ಯಾಂಕ್ ಖಾತೆಗೆ ಬಿ.ಸಿ.ರೋಡಿನಲ್ಲಿ 2,83,800 ರೂ. ಆನ್ಲೈನ್ ಮೂಲಕ, 50 ರೂ. ಹಾಗೂ 84,950 ರೂ, ಹಾಗೂ 71 ಸಾವಿರ ರೂ., 60 ಸಾವಿರ ರೂ., 16 ಸಾವಿರ ರೂ., 2,500 ರೂ., 2,100 ರೂ., 49 ಸಾವಿರ ರೂ, 45 ಸಾವಿರ ರೂ.ಗಳನ್ನು ಬೆಂಗಳೂರು ಬ್ಯಾಂಕ್ ಶಾಖೆಯ ಉಳಿತಾಯ ಖಾತೆಗೆ ಹಾಕಿಸಿಕೊಂಡಿದ್ದಾನೆ ಎಂದು ದೂರು ನೀಡಿದರು.
ಮಕ್ಕಳನ್ನು ಮುಂಬಯಿಗೆ ಬರ ಹೇಳಿದ್ದು, ಅಲ್ಲಿ ಅವರಿಂದ 15,600 ರೂ. ಪಡೆದು ಬಲ್ಗೇರಿಯಾದಲ್ಲಿ ಚಳಿ ಇದ್ದರಿಂದ ಜಾಕೆಟ್ ತರುವುದಾಗಿ ಹೇಳಿ ಹೋದವನು ಪರಾರಿಯಾಗಿದ್ದಾನೆ.
ಬಳಿಕ ಆತನ ಮೊಬೈಲ್ ಸಂಖ್ಯೆಗೆ ಕರೆ ಮಾಡಿದರೆ ಸ್ವಿಚ್ಚ್ ಆಫ್ ಬಂದಿದ್ದು, ಈ ಬಗ್ಗೆ ವಂಚನೆಗೊಳಪಟ್ಟ ಮಹಿಳೆ ಬಂಟ್ವಾಳ ನಗರ ಪೋಲಿಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಬಂಟ್ವಾಳ ನಗರ ಪೋಲಿಸರು ತನಿಖೆ ನಡೆಸುತ್ತಿದ್ದಾರೆ.