ಬಂಟ್ವಾಳ: ಬೆಂಗಳೂರು ಕೆ.ಜೆ.ಹಳ್ಳಿ , ಡಿ.ಜೆ.ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಟ್ಲ, ಬಂಟ್ವಾಳ ಹಾಗೂ ಪುತ್ತೂರು ಪೋಲೀಸರು ವಶಪಡಿಸಿಕೊಂಡ ಬೋಳಂತೂರು ನಿವಾಸಿ ಹಾಗೂ ಪುತ್ತೂರಿನ ವ್ಯಕ್ತಿಯೋರ್ವನನ್ನು ಬೆಂಗಳೂರು ಪೊಲೀಸರು ಇಂದು ಬಂಧಿಸಿದ್ದಾರೆ.
ಬಂಟ್ವಾಳದ ಮಹಮ್ಮದ್ ತಂಸೀರ್ ಹಾಗೂ ಪುತ್ತೂರು ನಿವಾಸಿ ಅಬ್ದುಲ್ ಖಾದರ್ ಬಂಧಿತ ಆರೋಪಿಗಳು.
ಬಂಟ್ವಾಳ ಪೋಲೀಸರ ತಂಡ ರಾಜ್ಯದ ಪೋಲೀಸ್ ನಿರ್ದೇಶನದಂತೆ ಬಂಟ್ವಾಳ ಡಿ.ವೈಎಸ್ ಪಿ ಅವರ ಮಾರ್ಗದರ್ಶನದಲ್ಲಿ ನಿನ್ನೆ ಬಂಟ್ವಾಳದ ಮಹಮ್ಮದ್ ತಂಸೀರ್ ಮನೆಗೆ ಮುಂಜಾನೆ ವೇಳೆ ದಾಳಿ ನಡೆಸಿದ್ದರು. ಬಳಿಕ ವಿಟ್ಲ ಪೋಲೀಸ್ ಇನ್ಸ್ಪೆಕ್ಟರ್ H.E ನಾಗರಾಜ್ ಅವರು ತಂಸೀರ್ನನ್ನು ವಿಚಾರಣೆ ನಡೆಸಿ ಮನೆಯಲ್ಲಿದ್ದ ಪ್ರಮುಖ ದಾಖಲೆಗಳನ್ನು ಹಾಗೂ ಮೊಬೈಲ್ ಫೋನ್ ವಶಕ್ಕೆ ತೆಗೆದುಕೊಂಡು ಆತನನ್ನು ವಶಕ್ಕೆ ತೆಗೆದುಕೊಂಡು ಬಂಟ್ವಾಳ ಪೊಲೀಸರಿಗೆ ಒಪ್ಪಿಸಲಾಗಿತ್ತು.
ಎಸ್.ಐ. ಹರೀಶ್ ಹಾಗೂ ಸಿಬ್ಬಂದಿಆರೋಪಿಗಳನ್ನು ಪೋಲೀಸ್ ವಾಹನದ ಮೂಲಕ ಪುತ್ತೂರು ನಿವಾಸಿ ಅಬ್ದುಲ್ ಖಾದರ್ ಹಾಗೂ ಬೊಳಂತೂರು ನಿವಾಸಿ ಮಹಮ್ಮದ್ ತಂಸೀರ್ ಇಬ್ಬರನ್ನು ಬೆಂಗಳೂರಿಗೆ ನಿನ್ನೆ ಕರೆದುಕೊಂಡು ಹೋಗಿದ್ದು, ಇಂದು ಮುಂಜಾನೆ ಬೆಂಗಳೂರು ತಲುಪಿದ್ದಾರೆ.
ಆ ಬಳಿಕ ಬಂಟ್ವಾಳ ಪೋಲೀಸರ ತಂಡ ಆರೋಪಿಗಳಿಬ್ಬರನ್ನು ಬೆಂಗಳೂರು ಪೋಲೀಸರ ಕೈಗೆ ಒಪ್ಪಿಸಿದ್ದಾರೆ. ಬೆಂಗಳೂರು ಪೋಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ ಬಳಿಕ ನ್ಯಾಯಾಲಯಕ್ಕೆ ಹಾಜರು ಪಡಿಸುವ ಸಾಧ್ಯತೆಗಳಿವೆ.