ಬಂಟ್ವಾಳ: ತಾಲೂಕಿನಲ್ಲಿ ಶಂಕಿತ ಡೆಂಗ್ಯೂ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನೋರ್ವ ಬಲಿಯಾದ ಘಟನೆ ಜೂನ್ 9ರಂದು ನಡೆದಿದೆ. ವಾಮದಪದವು ನಿವಾಸಿ ಕೃಷಿಕ ಸಂದೀಪ್ ಪೂಜಾರಿ(31) ಮೃತಪಟ್ಟ ಯುವಕ.
ಜ್ವರದಿಂದ ಬಳಲುತ್ತಿದ್ದ ಆತ ಕಳೆದ ಕೆಲವು ದಿನಗಳಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಜೂನ್ 9ರಂದು ಮೃತಪಟ್ಟಿದ್ದಾನೆ. ಸಂದೀಪ್ ಅವರ ತಂದೆ ಹಳ್ಳಿ ವೈದ್ಯನಾಗಿ ಸೇವೆ ಸಲ್ಲಿಸಿದರೆ, ತಾಯಿ ಪುಷ್ಪಾವತಿ ವಾಮದಪದವು ಗ್ರಾಮಪಂಚಾಯತ್ ಸದಸ್ಯರಾಗಿದ್ದಾರೆ. ಸಂದೀಪ್ ಅವರು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು, ಸಿದ್ದಕಟ್ಟೆ ರೋಟರಿ ಸದಸ್ಯ ಹಾಗೂ ವಾಮದಪದವು ಪ್ರೌಢ ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರಾಗಿದ್ದರು. ಇತ್ತೀಚಿಗೆ ಮದುವೆಯಾಗಿದ್ದು ಒಂದು ವರ್ಷದ ಮಗು, ಪತ್ನಿ ಸಹಿತ ಅಪಾರ ಬಂದು ಬಳಗವನ್ನು ಅಗಲಿದ್ದಾರೆ.
ಹೆಚ್ಚುತ್ತಿರುವ ಡೆಂಗ್ಯೂ ಪ್ರಕರಣ;
ಬಂಟ್ವಾಳ ತಾಲೂಕಿನಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಇಲ್ಲಿಯ ತನಕ ಸುಮಾರು 17 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ. ಈ ಕುರಿತಂತೆ ಡಾ. ನವೀನ್ ಚಂದ್ರ ಕುಲಾಲ್ ಮಂಗಳೂರು ಅವರು ಮಾಹಿತಿ ನೀಡಿದ್ದಾರೆ. ಕಣ್ಣುಮುಚ್ಚಾಳೆಯ ಆಟದಂತೆ ಸುರಿಯುವ ಮಳೆಗೆ ಹಾಗೂ ಅಜಾಗರೂಕತೆಯ ಕಾರಣದಿಂದಾಗಿ ಡೆಂಗ್ಯೂ ಪ್ರಕರಣಗಳು ಪತ್ತೆಯಾಗುತ್ತಿದ್ದು, ಜನರು ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.
ಮನೆಯ ಸುತ್ತ ಮುತ್ತ ಸಾರ್ವಜನಿಕರು ನೀರು ನಿಲ್ಲದಂತೆ ಕ್ರಮ ವಹಿಸಬೇಕಾಗಿದ್ದು, ಇದರಿಂದಾಗಿ ಡೆಂಗ್ಯು ಪ್ರಕರಣಗಳನ್ನು ನಿಯಂತ್ರಿಸಬಹುದಾಗಿದೆ. ಅಲ್ಲದೆ, ಅನಾರೋಗ್ಯ ಸಂದರ್ಭ ನಿರ್ಲಕ್ಷ್ಯ ವಹಿಸದೆ, ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದು ಅಗತ್ಯವಾಗಿದೆ.