ಬಂಟ್ವಾಳ: ಐಸಿಯು ಬಸ್ಸು ಆರೋಗ್ಯ ಸೇವೆ ಹಾಗೂ ಕಾರ್ಮಿಕ ಕಿಟ್ ವಿತರಣೆಯಲ್ಲಿ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿ ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಬಿ.ಸಿ.ರೋಡಿನ ಮಿನಿ ವಿಧಾನ ಸೌಧದಲ್ಲಿರುವ ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಸರಕಾರದ ಸೌಲಭ್ಯಗಳನ್ನು ಫಲಾನುಭವಿಗಳಿಗೆ ತಲುಪಿಸದೆ ಕಾಂಗ್ರೆಸ್ ಹಾಗೂ ಬೆಜೆಪಿ ಕಾರ್ಯಕರ್ತರೆಂದು ತಾರತಮ್ಯ ಮಾಡುತ್ತಿದ್ದಾರೆ ಈ ಬಗ್ಗೆ ತಾಲೂಕು ದಂಡಾಧಿಕಾರಿ ತಹಸೀಲ್ದಾರ್ ಗೆ ದೂರು ನೀಡಿದ್ದೇವೆ. ಅದಕ್ಕೆ ಸ್ಪಂದಿಸದಿದ್ದಲ್ಲಿ ಐಸಿಯು ಬಸ್ಸಿನ ಎದುರು ಅಡ್ಡಲಾಗಿ ಮಲಗಿ ಪ್ರತಿಭಟನೆ ನಡೆಸುವುದಾಗಿ ಮಾಜಿ ಸಚಿವ ರಮಾನಾಥ ರೈ ಎಚ್ಚರಿಸಿದರು.
ಐಸಿಯು ಬಸ್ಸು ಬಿಜೆಪಿ ಅಧಿಕಾರ ಇರುವ ಪಂಚಾಯತ್ ಗಳಲ್ಲಿ ಅಲ್ಲೇ ಆರೋಗ್ಯ ಸೇವೆ ನೀಡುತ್ತದೆ. ಅಧಿಕಾರ ಇಲ್ಲದ ಕಡೆ ತಮಗೆ ಬೇಕಾದಲ್ಲಿಗೆ ಹೋಗುತ್ತದೆ. ಕಿಟ್ ಗಳನ್ನು ತಮಗೆ ಬೇಕಾದವರು ಕಾರಿನಲ್ಲಿ ಕೊಂಡುಹೋಗಿ ಕೊಡುತ್ತಿದ್ದಾರೆ. 2 ಸಾವಿರ ರೂಪಾಯಿ ಮೌಲ್ಯದ ಕಿಟ್ ನಲ್ಲಿ ಫಲಾನುಭವಿಗಳಿಗೆ ತಲುಪುವಾಗ 600 -700 ರೂ.ಗಳ ವಸ್ತುಗಳು ಮಾತ್ರ ಇರುತ್ತದೆ. ಉಳಿದವು ಎಲ್ಲಿಗೆ ಹೋಗಿದೆ ಎಂಬುದಕ್ಕೆ ಉತ್ತರಿಸಬೇಕಿದೆ.
94 ಸಿ ವಿತರಣೆಯಲ್ಲೂ ರಾಜಕೀಯ ಮಾಡುತ್ತಿದ್ದು, ಇವರ ಶಕ್ತಿಕೇಂದ್ರವರು ಹೇಳಿದವರಿಗೆ ಮಾತ್ರ ಹಕ್ಕುಪತ್ರ ನೀಡಲಾಗುತ್ತಿದೆ. ನಮ್ಮ ಅವಧಿಯಲ್ಲಿ ನಿಜವಾದ ಫಲಾನುಭವಿಗಳಿಗೆ ವಿತರಿಸಿದ್ದೇವೆ. ಯಾವ ಶಕ್ತಿಕೇಂದ್ರವೂ ಇರಲಿಲ್ಲ ಎಂದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಪದ್ಮಶೇಖರ್ ಜೈನ್, ಚಂದ್ರಪ್ರಕಾಶ್ ಶೆಟ್ಟಿ, ತಾ.ಪಂ.ಮಾಜಿ ಉಪಾಧ್ಯಕ್ಷ ಅಬ್ಬಾಸ್ ಆಲಿ, ಪುರಸಭಾ ಅಧ್ಯಕ್ಷ ಮಹಮ್ಮದ್ ಶರೀಫ್, ಉಪಾಧ್ಯಕ್ಷೆ ಜೆಸಿಂತಾ, ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಜಯಂತಿ ಪೂಜಾರಿ, ಲವೀನಾ ವಿಲ್ಮ ಮೊರಾಸ್ ಮೊದಲಾದ ಪ್ರಮುಖರು ಉಪಸ್ಥಿತರಿದ್ದರು.