ಕಿರುತೆರೆ ಪ್ರೇಕ್ಷಕರಿಗೆ ಬಿಗ್ ಬಾಸ್ (Bigg Boss) ರಿಯಾಲಿಟಿ ಶೋ ಬಗ್ಗೆ ಸಖತ್ ಕ್ರೇಜ್. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಮುಂತಾದ ಭಾಷೆಗಳಲ್ಲಿ ಈ ಕಾರ್ಯಕ್ರಮ ಫೇಮಸ್ ಆಗಿದೆ. ಎಷ್ಟೋ ಬಾರಿ ಬಿಗ್ ಬಾಸ್ ಸ್ಪರ್ಧಿಗಳು ಯಾರು ಎಂಬುದಕ್ಕಿಂತಲೂ ಆ ಕಾರ್ಯಕ್ರಮದ ನಿರೂಪಣೆ ಯಾರು ಮಾಡುತ್ತಾರೆ ಎಂಬುದೇ ಹೆಚ್ಚು ಮುಖ್ಯವಾಗುತ್ತದೆ. ಕನ್ನಡದಲ್ಲಿ ಕಿಚ್ಚ ಸುದೀಪ್ ಹಿಂದಿಯಲ್ಲಿ ಸಲ್ಮಾನ್ ಖಾನ್ ಅವರು ಈ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿಕೊಂಡು ಬರುತ್ತಿದ್ದಾರೆ. ಆದರೆ ತೆಲುಗು ಮತ್ತು ತಮಿಳಿನಲ್ಲಿ ಬದಲಾವಣೆಗಳು ಆಗುತ್ತಿವೆ. ತಮಿಳು ಬಿಗ್ ಬಾಸ್ 5 (, Bigg Boss Tamil 5) ನಿರೂಪಣೆ ಮಾಡುತ್ತಿದ್ದ ಕಮಲ್ ಹಾಸನ್ (Kamal Haasan) ಅವರಿಗೆ ಕೊರೊನಾ ಪಾಸಿಟಿವ್ ಆಗಿದೆ. ಈ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ಈಗ ನಟಿ ರಮ್ಯಾ ಕೃಷ್ಣ (Ramya Krishnan) ಆಗಮಿಸಿದ್ದಾರೆ ಎಂಬ ಸುದ್ದಿ ಹಬ್ಬಿದೆ.
ಕಮಲ್ ಹಾಸನ್ ಅವರಿಗೆ ಕೊವಿಡ್ ಸೋಂಕು ತಗುಲಿರುವುದು ಕೆಲವೇ ದಿನಗಳ ಹಿಂದೆ ಖಚಿತಗೊಂಡಿತು. ಸದ್ಯ ಅವರು ಬಿಗ್ ಬಾಸ್ ಕಾರ್ಯಕ್ರಮದ ನಿರೂಪಣೆಗೆ ಬ್ರೇಕ್ ನೀಡಿ, ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ನಿರೂಪಣೆಯ ಜಬಾವ್ದಾರಿಯನ್ನು ಯಾರು ಹೊತ್ತುಕೊಳ್ಳುತ್ತಾರೆ ಎಂಬ ಪ್ರಶ್ನೆ ಮೂಡಿತು. ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ಅವರಿಗೆ ಈ ಕೆಲಸ ವಹಿಸುವ ಸಾಧ್ಯತೆ ಇದೆ ಎಂಬ ಮಾಹಿತಿ ಹರಡಿತ್ತು. ಆದರೆ ಅದು ನಿಜವಾಗಿಲ್ಲ. ಸದ್ಯ ಬಹುಭಾಷಾ ಕಲಾವಿದೆ ರಮ್ಯಾ ಕೃಷ್ಣ ಹೆಸರು ಕೇಳಿಬರುತ್ತಿದೆ.
ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಸಿನಿಮಾಗಳಲ್ಲಿ ನಟಿಸಿ ಜನಪ್ರಿಯತೆ ಪಡೆದಿರುವ ರಮ್ಯಾ ಕೃಷ್ಣ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಕಿರುತೆರೆಯಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಕೆಲವು ಕಾರ್ಯಕ್ರಮಗಳಿಗೆ ನಿರೂಪಕಿಯಾಗಿ, ಜಡ್ಜ್ ಆಗಿ ಕೆಲಸ ಮಾಡಿದ ಅನುಭವವೂ ಅವರಿಗೆ ಇದೆ. ನಂ.1 ಜೋಡಿ, ಬಿಗ್ ಬಾಸ್ ಜೋಡಿಗಳ್ ಮುಂತಾದ ಶೋಗಳಿಗೆ ಅವರು ನಿರ್ಣಾಯಕಿ ಆಗಿದ್ದರು.
2019ರಲ್ಲಿ ‘ಬಿಗ್ ಬಾಸ್ ತೆಲುಗು ಸೀಸನ್ 3’ ನಿರೂಪಣೆಯನ್ನು ನಾಗಾರ್ಜುನ ಮಾಡಿದ್ದರು. ಆದರೆ ಅನಿವಾರ್ಯ ಕಾರಣಗಳಿಂದ ಅವರು ಕೆಲವು ವಾರಗಳ ಕಾಲ ನಿರೂಪಣೆ ಮಾಡಲು ಸಾಧ್ಯವಾಗಿರಲಿಲ್ಲ. ಆಗ ಅವರ ಸ್ಥಾನವನ್ನು ತುಂಬಿದ್ದರು ರಮ್ಯಾ ಕೃಷ್ಣ. ಆ ಅನುಭವವನ್ನೇ ಇಟ್ಟುಕೊಂಡು ಅವರೀಗ ‘ತಮಿಳು ಬಿಗ್ ಬಾಸ್ ಸೀಸನ್ 5’ ನಿರೂಪಣೆ ಮಾಡಲಿದ್ದಾರೆ ಎನ್ನಲಾಗಿದೆ.